November 14, 2009 by keerthishankaraghatta

ನೀವು ನಿಮ್ಮ ಜೀವನದಲ್ಲಿ ಯಾವತ್ತಾದರೂ ಹೊಲದಲ್ಲಿ ಉಳುಮೆ ಮಾಡಿದೀರಾ? ಕುಯ್ಲು ಅನ್ನೋ ಪದ ಕೇಳಿದೀರಾ? ಒಂದು ಫಾರ್ಮ್ ಅಂತ ಮಾಡ್ಕೊಂಡು ಅಲ್ಲಿ ನಿಮ್ಮದೇ ಆದ ಮನೆ, ಸಾಕು ಪ್ರಾಣಿಗಳು, ಟ್ರಾಕ್ಟರ್ ಇಟ್ಕೊಂಡಿದ್ರಾ? ಇವೆಲ್ಲ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದೋ? ಇಲ್ವೋ? ಗೊತ್ತಿಲ್ಲ.. ಆದ್ರೆ ನೀವೀಗ ಇಂಟರ್ನೆಟ್ ಮೂಲಕ ಪ್ರಗತಿ ಪರ ರೈತರಾಗಬಹುದು … ನಿಮ್ಮದೇ ಒಂದು ಫಾರ್ಮ್. ಅಲ್ಲಿ ನಿಮಗೆ ಇಷ್ಟ ಬಂದ ಬೆಲೆ, ಮರ-ಗಿಡ, ಸಾಕು ಪ್ರಾಣಿಗಳು, ಮನೆ, ರೆಸ್ಟ್ ಹೌಸ್, ಅದೂ ಇದೂ ಎಲ್ಲಾ.. ಆ ಫಾರ್ಮ್ ನ ಹೆಸರು ಫಾರ್ಮ್ ವಿಲ್…
ಹೇಗೆ ಅನ್ನೋದಾದ್ರೆ ಉತ್ತರ ಇಲ್ಲಿದೆ.. ನಿಮಗೆ ಇಂಟರ್ನೆಟ್ ಉಪಯೋಗಿಸೋಕೆ ಬರುತ್ತಾ? ನೀವು ಫೇಸ್ ಬುಕ್ ಮೆಂಬರಾ? ಹಾಗಿದ್ರೆ ನಿಮಗೂ ಒಂದು ಜಾಗ ಅಲ್ಲಿ ಮೀಸಲಿದೆ. ಅದು ನಿಮ್ಮದೇ ಸ್ವಂತ ಫಾರ್ಮ್. ಫಾರ್ಮ್ ಆರಂಭಿಸೋಕೆ ಅವರೇ ಒಂದಷ್ಟು ಹಣ ಕೊಟ್ಟು, ಜಾಗ ಕೊಟ್ಟು, ನಿಮಗೆ ಸಹಾಯ ಮಾಡ್ತಾರೆ. ಆಮೇಲೆಲ್ಲಾ ನಿಮ್ಮ ತಾಕತ್. ಹಂತ ಹಂತವಾಗಿ ಬೆಳೆ ಬೆಳೀತಾ ಹೋದ ಹಾಗೇ ನಿಮ್ಮಲ್ಲಿ ಹಣ ಜಾಸ್ತಿ ಆಗುತ್ತೆ. ನೀವೇ ಹೂಟಿ ಮಾಡ್ಬೇಕು, ನೀವೇ ಬೀಜ ಹಾಕ್ಬೇಕು, ನೀವೇ ಬೆಳೆ ಬೆಳೀಬೇಕು, ನೀವೇ ಕುಯ್ಲು ಮಾಡ್ಬೇಕು. ಇಂತಹ ಬೆಳೆ ಬೆಳೆಯೋಕೆ ಇಂತಿಷ್ಟು ಸಮಯ ಅಂತ ಬೇಕು. ಆ ಸಮಯದಲ್ಲಿ ಅದು ಸಂಪೂರ್ಣ ಫಸಲು ಕೊಟ್ಟಿರತ್ತೆ. ಅದನ್ನ ನೀವೇ ಕುಯ್ಲು ಮಾಡ್ತಿದ್ದ ಹಾಗೇ ನಿಮ್ಮ ಹಣ ಜಾಸ್ತಿ ಆಗುತ್ತೆ. ಆ ಹಣದಿಂದ ನೀವು ಮರ-ಗಿಡ, ಹಸು, ಕುರಿ, ಆನೆ, ಕುದುರೆ ಎಲ್ಲ ತಗೋಬಹುದು. ಹಾಗೇ ಬೆಳೆ ಬೆಳೆದು ಶ್ರೀಮಂತರಾಗ್ತಿದ್ದ ಹಾಗೇ ನಿಮ್ಮ ಫಾರ್ಮ್ ವಿಸ್ತೀರ್ಣ ಜಾಸ್ತಿ ಮಾಡ್ಕೋಬಹುದು. ಮನೆ ತಗೋಬಹುದು, ಹಂತ ಹಂತವಾಗಿ ಟ್ರಾಕ್ಟರ್, ಕುಯ್ಲು ಯಂತ್ರ, ನಾಟಿ ಯಂತ್ರ, ಬೈಕ್, ಎಲ್ಲ ತಗೋಬಹುದು. ನೀವು ಎಷ್ಟು ಇಂಟರೆಸ್ಟ್ ಇಟ್ಟು ಬೆಳೆ ಬೆಳೀತಿರೋ ಅಷ್ಟು ಬೇಗ ನಿಮ್ಮ ಲೆವೆಲ್ ಜಾಸ್ತಿ ಆಗ್ತ ಹೋಗುತ್ತೆ. ನಿಮ್ಮ XP ಜಾಸ್ತಿ ಆಗ್ತಾ ಇದ್ದ ಹಾಗೆಲ್ಲ ನಿಮ್ಮ ಲೆವೆಲ್ ಮೇಲೇರುತ್ತೆ. ಲೆವೆಲ್ ಏರ್ತಾ ಇದ್ದ ಹಾಗೇ ಹೊಸ ಹೊಸ ಬೆಳೆ ಬೆಳೆಯೋಕೆ ನಿಮ್ಮಿಂದ ಸಾಧ್ಯ ಆಗುತ್ತೆ. ನೀವಿಲ್ಲಿ ೮ ಗಂಟೆಯಲ್ಲಿ ಟೊಮೇಟೊ ಬೆಳೀಬಹುದು, ಒಂದು ದಿನದ ಒಳಗೆ ಸೂರ್ಯಕಾಂತಿ, ದ್ರಾಕ್ಷಿ ಬೆಳೀಬಹುದು, ೪ ಗಂಟೆಯಲ್ಲಿ ಸ್ಟ್ರಾಬೆರಿ ಬೆಳೆದು ಬಿಡಬಹುದು. ೧೦ ಕಾಯಿನ್ ಕೊಟ್ಟು ಸ್ಟ್ರಾಬೆರಿ ಹಾಕಿದ್ರೆ ೪ ಗಂಟೆಯ ಒಳಗೆ ನಿಮಗೆ ೪೦ ಕಾಯಿನ್ ಸಿಗತ್ತೆ. ಹಾಗೇ ಪ್ರತಿ ಬೆಳೆಗೂ ತನ್ನದೇ ಆದ ಬೆಲೆ. ತನ್ನದೇ ಆದ ಲಾಭ ಮತ್ತೊಂದು ಮಾತು, ಅಪ್ಪಿ ತಪ್ಪಿ ನಾಲ್ಕು ಗಂಟೆ ಒಳಗೆ ನೀವು ಸ್ಟ್ರಾಬೆರಿ ಕುಯ್ಲು ಮಾಡದಿದ್ರೆ ಐದನೇ ಗಂಟೆಗೆ ಬೆಳೆ ಹಾನಿ ಕಟ್ಟಿಟ್ಟ ಬುತ್ತಿ.
ಇನ್ನು ನಿಮ್ಮ ಫಾರ್ಮ್ ನ ಸುಂದರವಾಗಿ ಇಡೋಕೆ ಸಾಕಷ್ಟು ಡೆಕೊರೆಶನ್ ವಸ್ತುಗಳೂ ಇಲ್ಲಿ ಸಿಗತ್ತೆ. ಬೇಲಿ ಹಾಕ್ಕೊಳೋಕೆ ಸಾಧ್ಯ ಇದೆ. ನೀವು ಕೊಂದ ಹಸು, ಕುರಿ ಪ್ರತಿ ದಿನ ಹಾಲು ಕೊಡುತ್ತೆ, ಕೋಳಿ ಮೊಟ್ಟೆ ಇಡುತ್ತೆ. ಜೊತೆಗೆ ನಿಮ್ಮ ತೋಟದ ಸುತ್ತ ಇರೋ ಮರಗಳೂ ಹಣ್ಣು ಹಂಪಲು ಕೊಡ್ತಾ ಇರುತ್ತೆ. ಎಲ್ಲದರಿಂದಲೂ ಲಾಭ, ಹಣ ಗ್ಯಾರಂಟಿ. ಇನ್ನು ನಿಮ್ಮ ಫಾರ್ಮ್ ಸುತ್ತ ನಿಮ್ಮ ಸ್ನೇಹಿತರು neighbours ಆಗಬಹುದು. ಅವರ ತೋಟಕ್ಕೆ ಹೋಗಿ ಸಹಾಯ ಮಾಡಬಹುದು. ಅದಕ್ಕೂ ನಿಮಗೆ ಹಣ ಸಿಗತ್ತೆ. ಹೀಗೆ ಹಣ ಗಳಿಸ್ತಾ ಗಳಿಸ್ತಾ ಲೆವೆಲ್ ಜಾಸ್ತಿ ಮಾಡ್ಕೊಂಡು, ಫಾರ್ಮ್ ವಿಸ್ತೀರ್ಣ ಜಾಸ್ತಿ ಮಾಡ್ಕೊಂಡು, ನಿಮ್ಮ ಉಳಿದ ಸ್ನೇಹಿತರ ತೋಟಕ್ಕೆ ಗಿಫ್ಟ್ ಕೊಟ್ಕೊಂಡು ನಿಮ್ಮದೇ ಫಾರ್ಮ್ ನಲ್ಲಿ ನೀವೇ ಹೀರೋ ಆಗಿರಬಹುದು. ನೀವು ಫಾರ್ಮ್ ವಿಲ್ ನಲ್ಲಿ ಇಲ್ದೆ ಇದ್ರೆ ಈಗಲೇ ಫೇಸ್ ಬುಕ್ ಮೆಂಬರ್ ಆಗಿ. ನೀವು ಫಾರ್ಮಿಂಗ್ ಶುರು ಮಾಡಿ. ಪ್ರಗತಿ ಪರ ರೈತರಾಗಿ ಎಂದು ಹಾರೈಸ್ತೀನಿ.
. ಆದ್ರೆ ಒಂದು ನೆನಪಿರಲಿ, ನೀವು ಮಾಡಿದ ಫಾರ್ಮ್ ನ ಯಾರಿಗೂ ವಿಲ್ ಬರೆದು ಹೋಗೋಕೆ ಫಾರ್ಮ್ ವಿಲ್ ನಲ್ಲಿ ಅವಕಾಶ ಇಲ್ಲ…!!!
Posted in Uncategorized | Leave a Comment »

ಅದು ಗೋಪಾಲನ್ ಮಾಲ್. ಬೆಂಗಳೂರಿನ ಅದ್ರಲ್ಲೂ ಮೈಸೂರ್ ರೋಡಿನ ಜನಗಳ ಪಾಲಿಗೆ ಶಾಪಿಂಗ್ ಅಡ್ಡ. ನನ್ನ ಮನೆಗೂ ಅದು ಹತ್ರ ಅನ್ನೋ ಕಾರಣಕ್ಕೆ ನಂಗೂ ಅದು ಇಷ್ಟ. ಸಾಮಾನ್ಯವಾಗಿ ನನ್ನ ಫ್ರೀ ಟೈಮ್ ನಲ್ಲಿ ಅಲ್ಲೇ ಸಾಯ್ತಾ ಇರ್ತೀನಿ. ಹಾಗೆ ಕಳೆದ ಭಾನುವಾರಾನೂ ನಾನಲ್ಲಿಗೆ ಹೋಗಿದ್ದೆ. ಸಹಜವಾಗಿ ವಯಸಿನ ಹುಡುಗನ ಕಣ್ಣುಗಳು ಅತ್ತಿಂದಿತ್ತ ಹುಡುಗಿಯರನ್ನೇ ಹುಡುಕ್ತಾ ಇದ್ವು. ಅಲ್ಯಾರೋ ಕೂಡಿ ಹಾಕಿದವಳು, ಇಲ್ಯಾವ್ದೋ ಪ್ಯಾಂಟ್ ಟಿ- ಶರ್ಟ್ ಹಾಕಿ ಮಿಂಚ್ತಾ ಇದ್ದಾಕೆ. ಅಲ್ಯಾವ್ದೋ ಮಿಡಿ ಮಿನಿ.. ಕಣ್ಣುಗಳು ಬೆಳಕಿಗಿಂತಾ ವೇಗವಾಗಿ ಎಲ್ಲರನ್ನೂ ಸೆರೆ ಹಿಡೀತಾ ಇತ್ತು. ನನ್ನ ಕಣ್ಣುಗಳು ಹುಡುಗಿಯರನ್ನ ನೋಡುವ ವಿಚಾರ ಬಂದಾಗ ನನಗಿಂತಾ ವೇಗ. ಹೀಗೆ ಮೂರೂ ಫ್ಲೋರ್ ಗಳನ್ನ ಸುತ್ತುತಾ ಇರೋವಾಗ ಒಂದು ಪ್ಯಾಂಟ್ ಶರ್ಟ್ ಹಾಕಿದ ಹುಡುಗಿ ಮುದ್ದಾಗಿದಾಳೆ ಅನ್ಸಿ ಸುಮ್ಮನೆ ಅವಳ ಕಡೆ ಕಣ್ಣು ಹಾಯಿಸದೆ. `ಶಿವ ಶಿವ’ ಅವಳ ಕಣ್ಣುಗಳೂ ನನ್ನನ್ನೇ ನೋಡ್ತಾ ಇದ್ವು. ಕರ್ಮ ಕಾಂಡ ಅನ್ಕೊಂಡು ಸುಮ್ಮನೆ ಅಲ್ಲೆಲ್ಲೋ ನೋಡೋ ನಾಟಕ ಆಡಿ ವಾರೆಗಣ್ಣಲ್ಲಿ ನೋಡಿದ್ರೆ ಏನಲೇ ಅನ್ನೋ ಹಾಗೆ ನನ್ನನ್ನೇ ನೋಡ್ತಿದ್ಲು. ಲೈಟ್ ಆಗಿ ಮೀಟರ್ ಆಫ್ ಆಯ್ತು. ಸುಮ್ಮನೆ ಜಾಗ ಖಾಲಿ ಮಾಡೋಣ ಅನ್ಕೊಂಡು ಎಸ್ಕಲೇಟರ್ ಮೇಲೆ ಕಾಲಿಟ್ರೆ ಅವಳೂ ಹಿಂದೆಯೇ ಇದಾಳೆ. ನಂಗ್ಯಾವ್ ಪಜೀತಿನಪ್ಪ ಅನ್ಕೊಂಡು, ಸ್ವಲ್ಪ ಧೈರ್ಯ ತಂದ್ಕೊಂಡು ನಾನೂ ಗುರಾಯ್ಸೋಕೆ ಶುರು ಮಾಡ್ದೆ. ಅವಳ ಹುಬ್ಬು ಮೇಲೆರ್ತಾ ಇತ್ತು. ಕಣ್ಣಲ್ಲೇ ಏನು ಅಂತ ರೆಗಿಸ್ತಾ ಇದ್ಲು. ಅವಳ ಜೊತೆಗೆ ಬೇರೆ ಯಾರೂ ಇಲ್ಲ ಅನ್ನೋದು ಮೊದಲು ಪಕ್ಕಾ ಮಾಡ್ಕೊಂಡು ನಾನೇ ಅವಳ ಹತ್ರ ಹೋಗಿ `ಯಾಕ್ ಮೇಡಂ ಹಂಗೆ ಗುರಾಯಿಸ್ತಿದೀರ’ ಅಂತ ಕೇಳೇ ಬಿಟ್ಟೆ. ಅವಳೂ ಫುಲ್ ರೆಡಿ ಆಗಿದ್ಲು. `ಫರ್ಸ್ಟ್ ಗುರಾಯ್ಸಿದ್ದು ನೀವಾ? ನಾನಾ?’ ಅಂತ ಕೇಳಿದ ಮೇಲೆ ನಾನೂ ನಿಜ ಹೇಳ್ದೆ. ನಾನೇ ಇರ್ಬೋದು ಆದ್ರೆ ಇಷ್ಟು choke ಯಾಕ್ ಕೊಡ್ತಿದೀರ ಅಂತ ಕೇಳ್ದೆ. ಏನಿಲ್ಲ ನಾನೂ observe ಮಾಡ್ದೆ. ತುಂಬಾ active ಆಗಿ ಮಾಲ್ ತುಂಬಾ ಓಡಾಡ್ತಾ ಇದ್ರಲ್ಲ, ಯಾವ್ ತರ್ಲೆ ನೋಡೋಣ ಅನ್ಕೊಂಡು ನಾನೂ ಸ್ವಲ್ಪ ಕಿರಿಕ್ಕ್ ಮಾಡ್ದೆ ಅಂತ ಹೇಳಿದ್ಲು. ಸರಿ ತಪ್ಪಾಯ್ತು ನೀವಿನ್ ಹೊರಡಿ ಅಂತ ನಾನೂ ಹೊರಡೋಕೆ ರೆಡಿ ಆದೆ. `ಅರೆ ಏನ್ ಅರ್ಜೆಂಟು, ಜೊತೆಗೆ ಕಾಫಿನಾದ್ರೂ ಕುಡಿಯೋಣ ಬನ್ರಿ’ ಅಂದವಳೇ ಕಾಫಿ ಡೇ ಕಡೆ ಹೊರಟೇ ಬಿಟ್ಲು. `ನಾನ್ ಕಾಫಿ ಕುಡಿಯಲ್ಲ’ ಅಂತ ಹೇಳಿದ್ರೂ ಸಹ `ಬೇರೆ ಏನಾದ್ರೂ ಕುಡೀಬೋದು ಬನ್ನಿ’ ಅಂತ ಸುಮ್ಮನೆ ಹೊರಟ್ಲು. ನಾನೂ ಹಿಂದಿಂದೆ ಹೊರಟೆ.
ಕಾಫಿ ಡೇಲಿ ಕೂತವಳೇ ಪಟ ಪಟ ಮಾತು ಶುರು ಮಾಡಿದ್ಲು. `ನೀವೆಲ್ಲಾ ಹುಡುಗರೂ ಹೀಗೆ. ಯಾರದ್ರೂ ಒಂಟಿ ಹುಡುಗರು ಸಿಕ್ಬಿಟ್ರೆ ಗುರಾಯ್ಸೋಕ್ ಶುರು ಮಾಡ್ಬಿಡ್ತೀರ. ನಮ್ಮಂತ ಘಾಟಿ ಹುಡ್ಗೀರೆ ಸರಿ ನಿಮಗೆ’ ಹಂಗೆ ಹಿಂಗೆ ಅಂತ blast ಮಾಡ್ತಾನೆ ಇದ್ಲು. ಅದರ ಜೊತೆಜೊತೆಗೆ `ನೀವ್ ನೋಡೋಕ್ ಒಳ್ಳೆ ಹುಡುಗನ ತರ ಕಾಣ್ತೀರ, ಅದಕ್ಕೆ ಕಾಫಿಗೆ ಕರದೆ’ ಅನ್ನೋ ಮಾತು ಬೇರೆ ಬರ್ತಿತ್ತು. ನಂಗ್ಯಾವ್ ಕರ್ಮಾನಪ್ಪ ಅನ್ಕೊಂಡು ಸುಮ್ನೆ ಕೇಳಿಸ್ಕೊಂತಿದ್ದೆ. ಯಾವಾಗಲೂ ವಟ ವಟ ಮಾತಾಡೋ ಬಾಯಿ ಅವಳ ಮಾತುಗಳ ಮುಂದೆ silent ಆಗಿತ್ತು. ನನ್ನ ಬಾಯಿ ಮೇಲೆ ನನಗದೆಷ್ಟು ಸಿಟ್ಟು ಬಂದಿತ್ತೋ ನಂಗೆ ಗೊತ್ತು. ಅವಳು ಕಾಫಿ ಕುಡುದ್ಲು, ನಂಗೆ ಚಾಕಲೇಟ್ ಶೇಕ್ ಅವಳೇ ಆರ್ಡರ್ ಮಾಡಿದ್ಲು. ನಾನೂ ಗಟ ಗಟ ಅಂತ ಕುಡೀತಿದ್ರೆ ಅವಳು ಒಂದು ಸಿಪ್ ಕುಡ್ದು ಹತ್ತು ಮಾತಾಡ್ತಾ ಇದ್ಲು. ನಂಗೂ ಸಾಕಾಗಿ ಹೋಗಿತ್ತು. ಕೊನೆಗೆ `ಹೆಸರೇನ್ರಿ ನಿಮ್ಮದು?’ ಅಂದ್ಲು. ತೊದಲ್ತಾ ತೊದಲ್ತಾ `ಕಿರಣ್’ ಅಂತ ಸುಳ್ಳು ಹೇಳ್ಬಿಟ್ಟೆ. ನಿಮ್ದೂ ಅಂದ್ರೆ `ಶೈಲಾ’ ಅಂತ ಹೇಳಿದವಳೇ ನನ್ನ ನಂಬರ್ ಕೇಳಿದ್ಲು. ಅದನ್ನೂ ತಪ್ಪು ತಪ್ಪು ಕೊಟ್ಟೆ. ಅವಳದು ಕೇಳೋದು ಬೇಡ ಅನ್ಕೊಂಡೆ. ಆದ್ರೆ ಅವಳೇ ಕೇಳಿದ್ಲು, `ನಂ ನಂಬರ್ ಬೇಡ್ವ?’ ಅಂತ. `ಕೊಡೋದಾದ್ರೆ ಯಾರ್ ಬೇಡ ಅಂತಾರೆ’ ಅಂತ ನಾನೂ ಡೈಲಾಗ್ ಬಿಟ್ಟೆ. ಅವಳೂ ಅವಳ ನಂಬರ್ ಕೊಟ್ಟು ಬಿಲ್ pay ಮಾಡಿ ಅಲ್ಲಿಂದ bye ಹೇಳಿ ಹೊರಟೇ ಬಿಟ್ಲು. `ಸಿಕ್ ಸಿಕ್ ಹುಡ್ಗೀರ್ಗೆಲ್ಲ ರೆಗಿಸ್ಬೇಡ್ರಿ, ಎಲ್ರೂ ನಂ ತರ ಇರಲ್ಲ’ ಅಂತ ಹೇಳ್ತಾ ಹೇಳ್ತಾ ಬ್ಯಾಗ್ ಸಿಗಿಸ್ಕೊಂಡು ಹೀಲ್ಡ್ ಚಪ್ಪಲಿ ಮೇಲೇರಿ ಹೊರಟೇ ಬಿಟ್ಲು. ನಾನೂ ಉಸ್ಸಪ್ಪಾ ಅಂತ ನಿಟ್ಟುಸಿರು ಬಿಟ್ಟು ಅವಳು ಕೊಟ್ಟ ನಂಬರ್ ಗೆ ಅವಾಗ್ಲೇ dial ಮಾಡ್ದೆ. ಆ ಕಡೆ ಇಂದ ಬಂದ ವಾಯ್ಸ್ ಹೇಳಿದ್ದೇನು ಗೊತ್ತ? `ನೀವು ಕರೆ ಮಾಡಿರುವ ನಂಬರ್ ಸರಿ ಇದೆಯೇ ಪರೀಕ್ಷಿಸಿ. ನಂತರ dial ಮಾಡಿ..’ ಕಾಫಿ ಡೇ ಇಂದ ಹೊರಗೆ ಓಡೋಡಿ ಬಂದು ಅವಳನ್ನ ಹುಡುಕಿದರೆ ಅಲ್ಲೆಲ್ಲೂ ಆ ಜೀವ ಕಾಣಲಿಲ್ಲ. ನಾನೂ ಆಮೇಲೆ ಸಿಕ್ಕ ಸಿಕ್ಕ ಹುಡುಗೀರ ಕಡೆಗೆ ನೋಡಿದ, ಗುರಾಯ್ಸಿದ ಉದಾಹರಣೆ ಇಲ್ಲ. ಆದರೂ ಮನಸೊಳಗೊಂದು ಪ್ರಶ್ನೆ ಹಾಗೇ ಉಳ್ಕೊಂಡಿದೆ. ಅವಳ್ಯಾರು? ಯಾಕ್ ನಂಗೆ ಪುಕ್ಷತ್ತೆ ಬುದ್ದಿ ಹೇಳಿದ್ಲು? ಕಾಫಿ ಡೇಗೆ ಯಾಕ್ ಕರ್ಕೊಂಡ್ ಹೋದ್ಲು? ನಂಬರ್ ಯಾಕ್ ತಪ್ಪು ಕೊಟ್ಳು? ಅದಕ್ಕೇ ಇರಬೇಕು ಹೇಳೋದು, ಮೀನಿನ ಹೆಜ್ಜೆ ಕಂಡು ಹಿಡೀಬೊದು ಆದ್ರೆ ಈ ಹೆಣ್ ಮಕ್ಕಳ ಮನಸಲ್ಲೇನಿದೆ ಅನ್ನೋದನ್ನ ಮಾತ್ರ ಹೇಳೋಕಾಗಲ್ಲ ಅಂತ.. ನಮ್ಮಂತ ಹುಡ್ಗರನ್ನ ಆಂಜನೆಯಾನೆ ಕಾಪಾಡಬೇಕು.ಅಲ್ವಾ?..
ಅದೇನೇ ಇರ್ಲಿ ಸಮಯ ಸಿಕ್ಕಾಗಲೆಲ್ಲ ಗೋಪಾಲನ್ ಮಾಲ್ ನಲ್ಲಿ ಅವಳನ್ನ ನನ್ನ ಕಣ್ಣುಗಳು ಹುಡುಕ್ತಾ ಇವೆ. `ತಪ್ಪಾಯ್ತು ಕಣಮ್ಮ, ಕಣ್ಣು ತೆರೆಸಿದ ಹೆಣ್ಣೇ’ ಅಂತ ಹೇಳುವ ಸಲುವಾಗಿ..
Posted in Uncategorized | Leave a Comment »

ಮುಸ್ಸಂಜೆಯ ಕೆಂಪು ಮುಗಿಲಲಿ ಜಗವಾಳುವ ಸೂರ್ಯ ಮರೆಯಾದಂತೆ,
ಹುಚ್ಚು ಮನಸಿನ ನಿನ್ನ ಭಾವನೆಗಳಲಿ ಜಗಗೆಲ್ಲುವ ಪ್ರೀತಿಯದು ಬೆಚ್ಚಿ ಕುಳಿತಿದೆ
ನನಗೋ ಪ್ರೀತಿಯದು ಅಚ್ಚುಮೆಚ್ಚು…
ನಿನಗೋ ಮನದೊಳಗೆ ಉರಿವ ಕಿಚ್ಚು…
ನಿನಗಾಗಿ ಹೃದಯದ ಬಾಗಿಲಲಿ ಇಣುಕಿಣುಕಿ,
ನೋಡುತ್ತಾ ಕಾದು ಕುಳಿತಿದ್ದ ಪ್ರೀತಿಗೀಗ ದಣಿವಾಗಿದೆ…
ನನ್ನ ಹೃದಯದ ಹೊಸ್ತಿಲ ದಾಟಿ ಯಾವಾಗಲೋ ಓಡಿ ಹೋದ-
ನಿನ್ನ ಪ್ರೀತಿಯದು ಕೃಶವಾಗಿದೆ..
ನಿನ್ನ ಕೃಶವಾದ ಪ್ರೀತಿಯ ವಿಷವ ಬಸಿದು,
ನನ್ನ ದಣಿದ ಹೃದಯಕೆ ಚೈತನ್ಯ ಕೊಟ್ಟೇನು…
ಬಂದುಬಿಡು, ಬಂದು ನನ್ನೊಮ್ಮೆ ಸೇರಿಬಿಡು…
ಸೇರಿ ನನ್ನ ಪ್ರೀತಿಯೊಡನೆ ಬೆರೆತುಬಿಡು…
Posted in Uncategorized | Leave a Comment »
ನನ್ ಆರೋಗ್ಯ ಯಾಕೋ ಕೈ ಕೊಟ್ಟಿತ್ತು. ಹಾಗಾಗಿ ಡಾಕ್ಟ್ರು ಬ್ರೆಡ್ ತಿನ್ನು ಅಂತ ಸಲಹೆ ಕೊಟ್ಟಿದ್ರು. ಅವರಿಗ್ಯಾಕ್ ಬೇಜಾರ್ ಮಾಡ್ಸೋದು ಅಂತ ನಾನು ಸರಿ ಅಂತ ಹೇಳಿ ಒಂದು ಪೌಂಡ್ ಬ್ರೆಡ್ ತಂದು ಎರಡು ಪೀಸ್ ತಿಂದೆ. ಅಯ್ಯಯ್ಯಪ್ಪಾ, ಜನ ಇದನ್ ಅದೆಂಗ್ ತಿಂತಾರೋ ಅಂತ ಮನಸಲ್ಲೇ ಗೊಣಗ್ತಾ ಅಲ್ಲೇ ಬಿಟ್ಟೆ. ಎರಡು ದಿನ ಆದ್ಮೇಲೆ ರೂಮಿಗೆ ಬಂದ ಫ್ರೆಂಡ್ ಒಬ್ಬ ‘ ಲೋ ಮಂಗ ನನ್ ಮಗನೆ, ನೀನ್ ತಿಂದಿಲ್ಲ ಅಂದ್ರೆ ನಾಯಿಗಾದ್ರು ಹಾಕು. ಯಾಕ ವೇಸ್ಟ್ ಮಾಡ್ತಿಯ’ ಅಂತ ಬೈದ. ನನಗೂ ಅವನ ಮಾತು ನಿಜ ಅನ್ಸಿ ಮಾರನೆ ದಿನ ಆಫೀಸಿಗೆ ಹೊರಡುವಾಗ ಆ ಬ್ರೆಡ್ ಪ್ಯಾಕ್ ಕಷ್ಟ ಪಟ್ಟು ಬೈಕ್ ನ ಟ್ಯಾಂಕ್ ಮೇಲೆ ಇಟ್ಕೊಂಡು ಹೊರಟೆ. ರಾತ್ರಿ ಇಡೀ ನಿದ್ದೆ ಮಾಡೋಕೆ ಬಿಡದೆ ಬೊಗಳ್ತಿದ್ದ ನಾಯಿಗಳು ಅವತ್ತು ಒಂದು ಮನೆ ಹತ್ರ ಕಾಣ್ತಿಲ್ಲ. ನಮ್ ಏರಿಯ ನಾಯಿಗಳಿಗೆ ನಾನ್ ಕೊಡೊ ಬ್ರೆಡ್ ತಿನ್ನೋ ಯೋಗ ಇಲ್ಲ ಅನ್ಕೊಂಡು ಕಷ್ಟ ಪಟ್ಟು ಬೈಕ್ ನ ಕಿಕ್ ಹೊಡೆದು ನಿಧಾನವಾಗಿ ರಸ್ತೆಯ ಎರಡು ಕಡೆ ನಾಯಿಗಳನ್ನ ಹುಡುಕಿಕೊಂಡು ಹೊರಟೆ. ನನ್ನ ಗ್ರಹಚಾರಕ್ಕೆ ನಾನು ತಿಂಡಿಗೆ ಹೋಗೋ ಹೋಟೆಲ್ ತನಕ ಯಾವ ನಾಯಿನೂ ಕಾಣಲಿಲ್ಲ. ಹಾಳಾಗ್ ಹೋಗ್ಲಿ ಅಂತ ಬ್ರೆಡ್ ಪ್ಯಾಕ್ ನ ಹೆಲ್ಮೆಟ್ ಒಳಗೆ ಬಚ್ಚಿಟ್ಟು ತಿಂಡಿ ತಿಂದು ಮತ್ತೆ ಅಲ್ಲಿಂದ ಹೊರಟೆ. ಮತ್ತೆ ನನ್ನ ಕಣ್ಣುಗಳು ಹುಡುಕ್ತಾ ಇದ್ದಿದ್ದು ನಾಯಿಗಳನ್ನೇ. !!!
ಶ್ರೀನಗರದಿಂದ ಹೊರಟವನಿಗೆ ವಿವೇಕಾನಂದ ಸರ್ಕಲ್ ತನಕ ಒಂದೇ ಒಂದು ನಾಯಿ ಕಾಣಲಿಲ್ಲ. ನಂದ್ ಒಳ್ಳೆ ನಾಯಿ ಪಾಡಾಯ್ತಲ್ಲ ಅಂತ ಮನಸಲ್ಲೇ ಅನ್ಕೊಂಡು ಮತ್ತೆ ರಸ್ತೆಯ ಅತ್ತಿತ್ತ ನಾಯಿ ಹುಡುಕ್ತಾ ನಿಧಾನವಾಗಿ ಹೊರಟೆ. ಕರ್ಮಕಾಂಡ, ಬೆಂಗಳೂರಿನ ನಾಯಿಗಳಿಗೆಲ್ಲ ಏನಾಯ್ತಪ್ಪ ಅಂತ ಅನ್ಸೋಕೆ ಶುರು ಆಯ್ತು. ಆದರೂ ನನ್ ಹಠ ಬಿಡಲಿಲ್ಲ ನಾನು. ಹೇಗಾದ್ರು ಮಾಡಿ ಇವತ್ತು ನಾಯಿಗೆ ಬ್ರೆಡ್ ಹಾಕಲೇ ಬೇಕು ಅಂತ ಡಿಸೈಡ್ ಮಾಡ್ಕೊಂಡೆ.
ನನ್ನ ಗ್ರಹಚಾರಕ್ಕೆ ಕಾರ್ಪೋರೇಶನ್ ಸರ್ಕಲ್ ಬಂದರೂ ನನ್ ಕಣ್ಣಿಗೆ ಒಂದೇ ಒಂದು ನಾಯಿ ಕಾಣಿಸ್ಲಿಲ್ಲ. ಆದ್ರೆ ಬೇಸರದ ಹೆಚ್ಚು ಹೊತ್ತಿರಲಿಲ್ಲ, ಕಬ್ಬನ್ ಪಾರ್ಕ್ ಒಳ ಹೋಗ್ತಿದ್ದ ಹಾಗೆ ಒಂದು ಕಂದು ಬಣ್ಣದ ನಾಯಿ ಕಾಣಿಸಿದ ತಕ್ಷಣ ನನ್ನ ಖುಷಿಗೆ ಪಾರವೇ ಇರ್ಲಿಲ್ಲ. ಅಬ್ಬ ದೇವ್ರೇ ಕೊನೆಗೂ ಒಂದು ನಾಯಿನ ಕರುನಿಸಿದ್ಯಲ್ಲ ಅನ್ಕೊಂಡು ಅದಕ್ಕೆ ಬ್ರೆಡ್ ಹಾಕ್ತಾ ಇದ್ದ ಹಾಗೆ ಎಲ್ಲಿಂದಲೋ ಬಂತು ಅಶರೀರವಾಣಿ. `ರೀ ಯಾರ್ರಿ ಅದು.. ‘ ಅಂತ. ಕೋಲು ಹಿಡಿದು ಬಂದ ಸೆಕ್ಯೂರಿಟಿ ನಾಯಿಯನ್ನು ಅಲ್ಲಿಂದ ಓಡಿಸಿಯೇ ಬಿಟ್ಟ. ಆ ನಾಯಿ ಒಂದು ಪೀಸ್ ಸಹ ತಿಂದಿರಲಿಲ್ಲ. ಸೆಕ್ಯೂರಿಟಿ ನನ್ನನ್ನೇ ದುರುಗುಟ್ಟಿ ನೋಡ್ತಿದ್ದ, ಇಲ್ಲೇ ನಿಂತಿದ್ರೆ ನಂಗೂ ನಾಯಿ ಗತೀನೆ ಅಂತ ಗೊತ್ತಾಗಿ ನಿಧಾನವಾಗಿ ಅಲ್ಲಿಂದ ಜಾಗ ಖಾಲಿ ಮಾಡ್ದೆ..
ಆದರೂ ಇನ್ನೂ ಉಳಿದಿರುವ ಬ್ರೆಡ್ ಏನ್ ಮಾಡೋದು ಅನ್ನೋ ಚಿಂತೆ ಕಾಡ್ತಿತ್ತು. ಅಷ್ಟರಲ್ಲಿ ನನ್ ಬೈಕ್ ವಸಂತ ನಗರದ ಅಂಬೇಡ್ಕರ್ ಭವನದಲ್ಲಿತ್ತು. ಅಂಬೇಡ್ಕರ್ ಭವನದ ಎದುರಿಗೆ ಮಲಗಿದ್ದ ನಾಯಿಗೆ ಕುರು ಕುರು ಹೇಳಿ ಹತ್ತಿರ ಕರೆಸ್ಕೊಂಡು ಒಂದು ಪೀಸ್ ಬ್ರೆಡ್ ಹಾಕ್ದೆ. ಏನು ಉಪಯೋಗವಾಗಲಿಲ್ಲ, ನಾಯಿ ನನ್ನ ಮುಖ, ಬ್ರೆಡ್ ಎರಡನ್ನು ನೋಡಿ ಅಲ್ಲಿಂದ ಹೊರಟು ಹೋಯ್ತು. ಅಯ್ಯೋ ನಾಯಿನೆ ಅಂತ ಬೈಕೊಂಡು ಉಳಿದ ಬ್ರೆಡ್ ಹಿಡ್ಕೊಂಡು ಆಫೀಸ್ ಹತ್ರ ಬೈಕ್ ಪಾರ್ಕ್ ಮಾಡಿ ಪೈ ವಿಹಾರ್ ಹೋಟೆಲ್ ಎದುರಿಗಿದ್ದ ನಾಯಿಗೆ ಬ್ರೆಡ್ ತೋರಿಸಿ ಆಫೀಸ್ ಬಾಗಿಲಿನ ತನಕ ಕರ್ಕೊಂಡ್ ಬಂದು ಬ್ರೆಡ್ ಹಾಕಿದೆ. ನೋ ನೋ ನೋ ನಾಯಿಗಳು ಬ್ರೆಡ್ ಮೂಸ್ತಾನೆ ಇಲ್ಲ. ಇದೇನ್ ಗ್ರಹಚಾರಾನೋ ಏನೋ ಅನ್ಕೊಂಡು ಅಲ್ಲೇ ಮೂಲೇಲಿ ಬ್ರೆಡ್ ಪ್ಯಾಕ್ ಇಟ್ಟು ಆಫೀಸ್ ಒಳಗೆ ಹೊರಟುಬಿಟ್ಟೆ. ಮೆತ್ತಗೆ ಬಾಲ್ಕನಿಯಿಂದ ನಾನಿಟ್ಟ ಬ್ರೆಡ್ ಏನಾಯ್ತು ಅಂತ ನೋಡಿದ್ರೆ, ಅದಲ್ಲಿ ಅನಾಥ. ಯಾವ್ ನಾಯೀನು ಅದನ್ನ ಮುಟ್ಟಿಲ್ಲ. ಇನ್ ಮುಂದೆ ಮನೇಲೆ ಹಾಳಾದ್ರೂ ಪರವಾಗಿಲ್ಲ ನಾಯಿಗೆ ಮಾತ್ರ ಏನೂ ಹಾಕಲ್ಲ ಅಂತ ಮನಸಲ್ಲೇ ನಿರ್ಧಾರ ಮಾಡಿ ನನ್ ಕಂಪ್ಯೂಟರ್ ಮುಂದೆ ಕೂತು ನನ್ನ ನಾಯಿ ಪಾಡು ನೆನಸ್ಕೊಂಡು ಸುಮ್ನೆ ನಗ್ತಾ ಕೆಲಸ ಶುರು ಮಾಡ್ದೆ. ಆಫೀಸಿನ ಉಳಿದವರೆಲ್ಲ `ನಾಯಿ ನನ್ ಮಗಾ ಸುಮ್ ಸುಮ್ನೆ ನಗ್ತಿರ್ತಾನೆ ‘ ಅಂತ ಅನ್ಕೊಂಡು ಅವರವರ ಕೆಲಸದಲ್ಲಿ ಮುಳುಗಿ ಹೋದ್ರು.
Posted in Uncategorized | Leave a Comment »
September 26, 2009 by keerthishankaraghatta
ಇದು ನಾನು ನಿನಗೆ ಬರೀತಿರೋ ಕಟ್ಟ ಕಡೆಯ ಪತ್ರ… ಅದ್ಯಾಕೋ ಇತ್ತೀಚಿಗೆ ತುಂಬಾ ಅನ್ನಿಸ್ತಿದೆ ನಾನು ಮಾಡ್ತಿರೋದು ತಪ್ಪು ಅಂತ… ನನ್ನಿಂದಾಗಿ ನನ್ನ ಮನಸಿಗಂತೂ ಸಾಕಷ್ಟು ನೋವಾಗಿದೆ.. ಅದು ಈಗಾಗ್ಲೇ ನಿರ್ಧಾರ ಮಾಡಿಬಿಟ್ಟಿದೆ, ಮುಂದಿನ ಜನ್ಮ ಅಂತಿದ್ರೆ ನನ್ನ ಮನಸಾಗಬಾರದು ಅಂತ.. ಹಾಗಾಗಿ ಇರುವಷ್ಟು ದಿನವಾದ್ರೂ ಅದನ್ನ ಸಂತಸದಿಂದ ಇದೋ ಆಸೆ ಆಗಿದೆ… ಅದೇ ಕಾರಣಕ್ಕೆ ನಿನಗೆ ನನ್ನ ಜೀವನದ ಬಾಗಿಲು ಮುಚ್ತಾ ಇದ್ದೀನಿ… ಇನ್ಯಾವತ್ತೂ ನೀನು ನನ್ನ ಜೀವನದಲ್ಲಿ ಬರಲಾರೆ…
ನಾನು ನಿನ್ನ ಬೇಡಿಕೊಂಡ ರೀತಿಯಲ್ಲಿ ಬೇರೆ ಯಾರಿಗೆ ಬೇಡಿದರೂ ಇಷ್ಟರ ಒಳಗೆ ನನ್ನ ಆಲಂಗಿಸಿ ಜೀವನವಿಡೀ ಜೊತೆಗಿರುವ ಆಣೆ ಮಾಡಿರ್ತಿದ್ಲು.. ನಿನಗೆ ಆ ಮನಸ್ಸು ಯಾವತ್ತೂ ಬರಲಿಲ್ಲ… ಇನ್ಯಾವತ್ತೂ ಅದು ಬರೋದೂ ಬೇಡ… ಒಂದು ಸತ್ಯ ಹೇಳ್ತೀನಿ ಕೇಳು, ನನ್ನ ಈ ಪ್ರೀತಿಯ ಹುಚ್ಚು ನನ್ನನ್ನೇ ಬಲಿ ತೆಗೆದು ಕೊಳ್ಳಬೇಕಿತ್ತು.. ಪಾಪಿ ಜೀವ ಬದುಕ್ತು… ಪಾಪ ನನ್ನ ಮನೆಯವರು ನನ್ನಿಂದಾಗಿ ಎಷ್ಟು ಅನುಭವಿಸಿದರು.. ಅವರ ಕನ್ನೀರಿಗಾದ್ರು ಕೊನೆ ಬೇಡವಾ? ಹಾಗಾಗಿ ಮನಸೊಳಗೊಂದು ಗಟ್ಟಿ ನಿರ್ಧಾರ ಮಾಡಿದೀನಿ… ಇನ್ಯಾವತ್ತೂ ನಿನ್ನ ನೆನಪು ಮಾಡ್ಕೊಬಾರದು ಅಂತ… ಮರೆಯುವ ಜೀವ ಅಲ್ಲ ನೀನು.. ಆದರೂ ಮರೆಯುವ್ ಅವಶ್ಯಕತೆ, ಅನಿವಾರ್ಯತೆ ನನಗಿದೆ…
ನಿನ್ನೆದುರು ಎಷ್ಟು ಹೇಳಿಕೊಂಡರೂ ನಿಂದು ಕಲ್ಲು ಮನಸು.. ಅದನ್ನ ಶಿಲ್ಪಿ ಮಾಡುವ ಆಸೆ ಕೈ ಬಿಟ್ಟಿದ್ದೇನೆ… ಆದರೂ ಕೆಲವು ಆಸೆ ಇದು ಕನಿಷ್ಠ ಅದನ್ನಾದ್ರು ಈಡೇರಿಸು.. ಮೊದಲನೇದಾಗಿ, ನಿನ್ನ ಮದುವೆಗೆ ನನ್ನ ೧ ವಾರ ಮುಂಚೆ ಕರಿ.. ಪ್ಲೀಸ್… ನಾನೇ ಮುಂದೆ ನಿಂತು ಎಲ್ಲ ಕೆಲಸ ಮಾಡ್ಬೇಕು.. ನಿನ್ನ ಮದುವೆ ಆಗೋ ಶ್ರೀಮಂತ, ಇಂಜಿನಿಯರ್ ಹುಡುಗನ್ನ ನೋಡಿ ಹೊಟ್ಟೆ ಉರ್ಕೊಂಡು ಮೂಲೆಯಲ್ಲಿ ಕೂತು ಅಳಬೇಕು ನಾನು… ಪ್ಲೀಸ್… ಇನ್ನು ಇದೆ .. ಹೇಳಿದ್ರೆ ನಂಗೆ ಅಳು ಬಂದು ಬಿಡುತ್ತೆ.. ಸೊ… ಇಷ್ಟು ಸಾಕು… ಇದೊಂದು ಈಡೇರಿಸಿದ್ರೆ ನಿಂಗೇ ಸಾಯೋ ತನಕ ಋಣಿ ನಾನು.. ಒಂದು ನಿರ್ಧಾರ ಮಾಡಿದೀನಿ.. ಅವತ್ತು ಕಣ್ಣೀರು ಹಾಕೋ ತನಕ ನಾನು ನಿನಗೋಸ್ಕರ ಅಳೋದಿಲ್ಲ ಅಂತ…
ಇಷ್ಟೇ ವಿಷಯ… ಇನ್ಯಾವತ್ತೂ ಈ ಬ್ಲಾಗ್ ನಲ್ಲಿ ಏನೂ ಬರೆಯಲ್ಲ… ನಿನಗೆ ತೊಂದರೆ ಕೊಡಲ್ಲ… ನಿನ್ನ ಎಲ್ಲ ಗಿಫ್ಟ್ ಗಳನ್ನ ಈಗಾಗ್ಲೇ ದೂರಕ್ಕೆ ಬಿಸಾಕಿದೀನಿ… ಮತ್ಯಾವತ್ತೂ ನೆನಪಾಗದ ಹಾಗೆ… ಯಾವತ್ತೋ ನಿಂಗೇ ನನ್ನ ಕಳೆದುಕೊಂಡಿದ್ದಕ್ಕಾಗಿ ಬೇಸರ ಆಗದಿರಲಿ ಅಂತ ಆಶಿಸ್ತಾ… ನಿನ್ನ ಜೀವನದಿಂದ ದೂರ ಹೊರಟ… `ಇತಿ’ ನಿನ್ನ ಪ್ರೀತಿಯ…
Posted in Uncategorized | Leave a Comment »
September 26, 2009 by keerthishankaraghatta
3 ವರ್ಷದಿಂದ ಟೀವಿ ಫೀಲ್ಡ್ ನಲ್ಲಿ ಕೆಲಸ ಮಾಡಿದ್ದ ಜೀವ ಈಗ ರೇಡಿಯೋದಲ್ಲಿ ಜೀವನ ನಡೆಸ್ತಾ ಇದೆ.. ನನ್ನ ಜೀವನ ಈಗ 93.5 ಕಂಪಾನಂಕದಲ್ಲಿ… ಹ್ಹ ಹ್ಹ ಹ್ಹ… ಏನೋ ಒಂತರಾ ಚೆನ್ನಾಗನ್ನಿಸ್ತಾ ಇದೆ.. ಎಲ್ಲಾ ಹೊಸ ಮುಖಗಳೇ, ಹೇಗಪ್ಪ ಕೆಲಸ ಮಾಡೋದು ಅಂತ ಯೋಚಿಸ್ತಾ ಇದ್ದೆ.. ಈಗ ಆ ಚಿಂತೆ ದೂರ ಆಗಿದೆ. ಹೊಸ ಮುಖಗಳು ಎಷ್ಟೋ ವರ್ಷ ಹಳೆಯದೇನೋ ಎಂಬಂತೆ ಭಾಸವಾಗ್ತಾ ಇದೆ. ತುಂಬಾ ಫ್ರೆಂಡ್ಲಿ ಜೀವಗಳು.ಕೆಲವರಿಗೆ ನನ್ನ ಸಣ್ಣ ಕೋಪವಿದ್ದ ಹಾಗಿದೆ, ಆದ್ರೆ ಅದ್ಯಾಕೆ ಅಂತ ತಿಳ್ಕೊಳೋ ಪ್ರಯತ್ನದಲ್ಲಿದೀನಿ.. ಅದೇನೇ ಇರಲಿ ಕೆಲಸದಲ್ಲಿ ಹೊಸತನ ಇದೆ, ಕ್ರಿಯಾಶೀಲತೆ ಇದೆ, ಬಿಡುವಿಲ್ಲದ ಕೆಲಸ ಮಾಡೋದೇ ಖುಷಿಯಾದ ವಿಚಾರ… ಇಲ್ಲಿಂದ ಮುಂದೆ ಬೆಳವಣಿಗೆಯ ಹಾದಿ ಸುಗಮವಾದೀತು ಎಂಬ ನಿರೀಕ್ಷೆ ಎಷ್ಟರ ಮಟ್ಟಿಗೆ ನಿಜವಾದೀತು ಅನ್ನೋದನ್ನ ಕಾದು ನೋಡ್ಬೇಕು.. ನೀವೆಲ್ಲ ನನ್ನ ಕೆಲಸಕ್ಕೆ ಶುಭ ಹೇಳಿಬಿಡಿ…
Posted in Uncategorized | Leave a Comment »
September 24, 2009 by keerthishankaraghatta
ರಾತ್ರಿಯೇ ನನ್ನ ತಮ್ಮ ಶ್ರೀಕಾಂತ ಮೆಸೇಜ್ ಮಾಡಿದ್ದ, `ಅಣ್ಣಾ ಕಾವ್ಯ ನಮ್ಮನ್ನೆಲ್ಲ ಬಿಟ್ಟು ಹೋದಳು ‘ಅಂತ… ಆದ್ರೆ ನಾನದನ್ನ ಓದಿದ್ದು ಬೆಳಗ್ಗೆ ೮ ಗಂಟೆಗೆ… ಮೆಸೇಜ್ ಓದಿದ ಕೂಡ್ಲೇ ತಲೆ ತಿರುಗಿ ಹೋಯ್ತು.. ಅಯ್ಯೋ ದೇವ್ರೇ ನೀನೆಷ್ಟು ಕಟುಕ ಅಂತ ಅಂದುಕೊಳ್ತಿದ್ದ ಹಾಗೆಯೇ, ಅವಳ ಆ ನಗು, ಆ ಮುಗ್ಧ ಮುಖ, ಅರಳು ಹುರಿವ ಮಾತು ನೆನಪಾದವು.. ಮನಸು ತಡೀಲಿಲ್ಲ ಶ್ರೀಕಾಂತನಿಗೆ ಫೋನ್ ಮಾಡ್ದೆ, ಆ ಕಡೆಯಿಂದ ಅವನ ಗದ್ಗದಿತ ಧ್ವನಿ ಎಲ್ಲವನ್ನೂ ಹೇಳ್ತಿತ್ತು… ಅಷ್ಟರಲ್ಲಿ ಕಾವ್ಯಳ ಅಮ್ಮನ ಗೋಳಾಟದ ಧ್ವನಿ ನನ್ನ ಕಿವಿಗೆ ಬಿತ್ತು.. ಮನಸ್ಸು ತಡೀಲಿಲ್ಲ… ಆಮೇಲೆ ಮಾಡ್ತೀನಿ ಅಂತ ಹೇಳಿ ಫೋನ್ ಕಟ್ ಮಾಡ್ದೆ..
ಅಂದ ಹಾಗೆ ಈ ಕಾವ್ಯ ಯಾರು ಅಂತ ಹೇಳ್ಲಿಲ್ಲ ಆಲ್ವಾ.. ಅದೊಂದು ಮುಗ್ದ ಜೀವ..ಮಾತು ಜಾಸ್ತಿ ಅಷ್ಟೇ.. ಅವಳು ನನ್ನ ಜೂನಿಯರ್. ತುಂಬಾ ಪ್ರೀತಿಯಿಂದ ನನ್ನ ಕೀರ್ತಿ ಅಣ್ಣ ಅಂತ ಕರೀತಿದ್ಲು… ಪತ್ರಿಕೋದ್ಯಮ ಓದ್ತಾ ಇದ್ದ ಹುಡುಗಿ… ನನ್ನ ತಮ್ಮನ ಕ್ಲಾಸ್ ಮೆಟ್ . ಇತ್ತೀಚೆಗೆ ಅವಳ ಕಾಲೇಜ್ function ನಲ್ಲಿ ನಾನವಳನ್ನ ನೋಡಿದ್ದೆ… ಸೀರೆ ಉಟ್ಟು ಮಿಂಚ್ತಾ ಇದ್ಲು… ನಾನೇ ಒಂದಷ್ಟು ಫೋಟೋ ತೆಗೆದಿದ್ದೆ.. ಅದೇ ಲಾಸ್ಟ್ ನಾನವಳನ್ನ ನೋಡಿದ್ದು, ಅದಾಗಿ ಸ್ವಲ್ಪ ದಿನಕ್ಕೆ ಗೊತ್ತಾಯ್ತು ಅವಳ ದೇಹದೊಳಗೆ blood cancer ಎಂಬ ರಾಕ್ಷಸ ವಕ್ಕರಿಕೊಂಡಿದ್ದಾನೆ ಅಂತ… ಅದು ಅವಳನ್ನ ಆ ದಿನದಿಂದಲೇ ಕೊಲ್ತಾ ಇತ್ತು.. ಈ ವಿಷಯ ಕೇಳಿದ ಕೂಡ್ಲೇ ನಂಗೆ ತುಂಬಾ ಬೇಜಾರಾಗಿತ್ತು, ಆದ್ರೆ ದೇವರು ಅಷ್ಟು ಕ್ರೂರಿ ಆಗಿರಲಿಕ್ಕಿಲ್ಲ ಅಂದುಕೊಂಡು ಸಮಾಧಾನ ಮಾಡ್ಕೊಂಡಿದ್ದೆ…ಸುಮಾರು 3 ತಿಂಗಳ ಕಾಲ ಅವಳು ಆಸ್ಪತ್ರೆಯಲ್ಲಿ ಅನುಭವಿಸಿದ ಹಿಂಸೆ ಆ ದೇವರಿಗೆ ಪ್ರೀತಿ.. ಬರೀ ಕಹಿಯ ಔಷಧಿ, ಮುಷ್ಟಿ ಮುಷ್ಟಿ ಮಾತ್ರೆ ತಿಂದೆ ಬದುಕು ಸಾಗ್ತಿತ್ತು.. ಇತ್ತೀಚೆಗಷ್ಟೆ ಶ್ರೀಕಾಂತ ಹೇಳಿದ್ದ, ಅಣ್ಣಾ ಇನ್ನು ಸ್ವಲ್ಪ ದಿನದಲ್ಲಿ discharage ಮಾಡ್ತಾರೆ, ಮತ್ತೆ ಕಾಲೇಜ್ ಗೆ ಬರ್ತಾಳೆ ಅಂತ.. ಅದಾಗಿ 15 ದಿನದೊಳಗೆ ಅವಳ ಸಾವಿನ ಸುದ್ದಿ ಎಲ್ಲರ ಕಿವಿಗೆ ಬಿದ್ದು ಗರಬಡಿದ ಹಾಗಿದೆ…
ಅವಳ ಬಗ್ಗೆ ನನ್ನ ತಮ್ಮ ಒಮ್ಮೆ ಹೇಳಿದ್ದ… ` ಅಣ್ಣಾ, ಅವಳಿಗೆ ಎಜುಕೇಶನ್ ಲೋನ್ ಲೇಟ್ ಆಯ್ತು ಅಂದಿದ್ಕೆ ಬ್ಯಾಂಕ್ ಮ್ಯಾನೇಜರ್ ಗೆ ಪ್ರಶ್ನೆ ಮಾಡಿದ್ದಲ್ಲದೆ, ಮುಖ್ಯಮಂತ್ರಿ ಯಡಿಯೂರಪ್ಪನವರ ಕಾರ್ಯಕ್ರಮ ಒಂದರಲ್ಲಿ ನೇರವಾಗಿ ಈ ವಿಚಾರ ಚರ್ಚೆ ಮಾಡಿ ಸ್ವತಃ ಯೆಡಿಯೂರಪ್ಪನವರೇ ಬ್ಯಾಂಕ್ ಗೆ ಫೋನ್ ಮಾಡಿ ಲೋನ್ ಕೊಡಿಸಿದರು.. ‘ ಅಂತ.. ಅವನ ಆ ಮಾತು ಕೇಳಿದ ದಿನದಿಂದಲೇ ನಾನು ಅವಳಲ್ಲಿ ಒಬ್ಬಳು ಬರ್ಖಾ ದತ್ ಳನ್ನ ನೋಡೋ ಪ್ರಯತ್ನ ಮಾಡಿದ್ದೆ… ಮುಂದೊಂದು ದಿನ ಅವಳು ಪತ್ರಿಕೋದ್ಯಮದಲ್ಲಿ ಏನಾದ್ರೂ ಸಾಧಿಸ್ತಾಳೆ ಎಂಬ ನಂಬಿಕೆ ಇಟ್ಟಿದ್ದೆ… ಅದೆಲ್ಲಾ ಇಂದು ಸುಳ್ಳಾಗಿದೆ… ದೇವರು ನಾನ್ ಎಂತ ಕ್ರೂರಿ ಎಂಬುದನ್ನ ಮತ್ತೊಮ್ಮೆ ಸಾಬೀತು ಪಡಿಸಿದ್ದಾನೆ. ಅವಳ ಫ್ರೆಂಡ್ಸ್ ಗಳಿಗೆಲ್ಲ ಇದು ನುಂಗಲಾರದ ತುತ್ತು.. ಆದರು ಅವಳು ಎಲ್ಲರ ಮನಸಿನಲ್ಲಿ ನೂರು ಕಾಲ ಇರ್ತಾಳೆ…ಒಳ್ಳೆಯವರು ಈ ಪಾಪಿ ಪ್ರಪಂಚದಲ್ಲಿ ಜಾಸ್ತಿ ದಿನ ಬದುಕೋಲ್ಲ ಅಂತ ಅಂದುಕೊಂಡು ಅವಳ ಆತ್ಮಕ್ಕೆ ಎಲ್ಲರ ಪರವಾಗಿ ಶಾಂತಿ ಕೋರೋಣ…
we miss you sweet sis Kavya…..
Posted in Uncategorized | Leave a Comment »
September 21, 2009 by keerthishankaraghatta
ನಮಸ್ಕಾರ.. ಅದ್ಯಾಕೋ ಒಂದಷ್ಟು ದಿನದಿಂದ ಬರೆಯೋಕೆ ಮನಸಾಗಿರ್ಲಿಲ್ಲ… ಒಂದು ಕಡೆ ಕೆಲಸ ಬಿಟ್ಟಿದ್ದೆ.. ಮತ್ತೊಂದು ಕಡೆ ಹೊಸ ಕೆಲಸದ ಹುಡುಕಾಟದಲ್ಲಿದ್ದೆ.. ಈಗ ಕೆಲ್ಸಾ ಅಂತ ಸಿಕ್ಕಿದೆ.. ಮನಸ್ಸಿಗೆ ಸ್ವಲ್ಪ ನೆಮ್ಮದೀನು ಇದೆ.. ಹಾಗಾಗಿ ಮತ್ತೆ ಬರೆಯೋಣ ಅಂತ ಅನ್ಕೊಂಡೆ.. ಈ ಹಿಂದೆ ನೀನಿಲ್ಲದೆ ಬರೀತಿದ್ದಾಗಂತೂ ಬರೀ ಗೊಳೋ ಅಂತ ಕಣ್ಣೀರ್ ಹಾಕ್ಕೊಂಡು ಬರ್ದಿದ್ದೆ ಬಂತು… ಏನು ಉಪಯೋಗ ಆಗ್ಲಿಲ್ಲ.. ಈಗ ಹಳೆ ಹುಡುಗೀನು ಮರೆತು ನೆಮ್ಮದಿಯಾಗಿದೀನಿ ಅಂತ ನಂಗೇ ಅನ್ನಿಸ್ತಿದೆ… ಹಾಗಾಗಿ ಇನ್ಮುಂದೆ ಬರೀ ಲವ್ ಸ್ಟೋರಿ… ಕಿತ್ತೋಗಿರೋ ಫೀಲಿಂಗ್ಸ್ ಎಲ್ಲ ಬಿಟ್ಟು ಏನಾದ್ರೂ ಹೊಸ ತಾರಾ ಬರೆಯೋ ಪ್ಲಾನ್ ಮಾಡಿದೀನಿ… ಮಾತು ಕೊಟ್ಟ ಹಾಗೆ ಅನ್ಸಿದ್ದೆಲ್ಲ ಬರೀತೀನಿ… ನ್ಯೂಸ್, ಕಾಮೆಂಟ್, ತಮಾಷೆ, ಚರ್ಚೆ, ಸಿನಿಮಾ, ಸ್ಪೋರ್ಟ್ಸ್, ಲವ್, ಹುಡುಗೀರು, ಕಷ್ಟ ಸುಖ, ಅನುಭವ, ಎಲ್ಲಾ ಬರೀತೀನಿ… ರಸವತ್ತಾಗಿ ಬರೀತೀನಿ… ಸುಮ್ನೆ ಓದಿ.. ಓದಾದ್ ಮೇಲೆ ಒಂದು ಕಾಮೆಂಟ್ ಹಾಕಿ… ಅಷ್ಟೇ… ಓ ಕೆ… ಅಕ್ಷರಗಳಲ್ಲಿ ಸಿಗ್ತಾ ಇರೋಣ… ಆಗಾಗ ಇಲ್ಲಿಗೆ ಬರ್ತಾ ಇರಿ… ನಿಮ್ಮ ಕೀರ್ತಿ ಶಂಕರಘಟ್ಟ
Posted in Uncategorized | Leave a Comment »
September 21, 2009 by keerthishankaraghatta
Welcome to WordPress.com. This is your first post. Edit or delete it and start blogging!
Posted in Uncategorized | 1 Comment »