Feeds:
ಲೇಖನಗಳು
ಟಿಪ್ಪಣಿಗಳು

ಗ ನಾನು ನನ್ನ ಹತ್ತನೇ ಕ್ಲಾಸಿನ ದಸರಾ ರಜಾದಲ್ಲಿದ್ದೆ. ಆ ರಜಕ್ಕೆ ನಾನು ಅಜ್ಜಿ ಮನೆಗೆ ಹೋಗಿರಲಿಲ್ಲ. ಹಾಗಾಗಿ ಅಮ್ಮನ ಜೊತೆ ಮನೇಲೆ ಇದ್ದೆ. ನಾನು ಪರೀಕ್ಷೆ ಟೈಮಲ್ಲೇ ಓದೋ ಮಗಾ ಅಲ್ಲ. ಅಂತಾದ್ರಲ್ಲಿ ರಜದಲ್ಲಿ ಓದ್ತೀನ? ನೋ ಚಾನ್ಸ್… ಆದ್ರೆ ನಮ್ಮ ಹೋಟೆಲ್ ಗೆ ಊಟಕ್ಕೆ ಬರ್ತಿದ್ದ ಗಡ್ಡ ನಾಗೇಶ್ ಮಾಮ ನನ್ನನ್ನ ಅವರ ರೂಮಿಗೆ ಕರ್ಕೊಂಡ್ ಹೋಗಿ ಒಂದು ಪೆಟ್ಟಿಗೆ ಓಪನ್ ಮಾಡಿ ಅದ್ರಲ್ಲಿಂದ ನೂರಾರು ಪುಸ್ತಕ ತೋರ್ಸಿದ್ರು. ಇದೆಲ್ಲ ಓದಿದಿರಾ ಅಂತ ನಾನು ಆಶ್ಚರ್ಯದಿಂದ ಕೇಳಿದ್ದೆ. ಅವರೂ ಹೌದಪ್ಪ, ಓದಕ್ಕೆ ಅಂತ ತಂದಮೇಲೆ ಓದಬೇಕಲ್ಲ ಅಂದಿದ್ರು. ನಿಂಗೆ ಓದೋ ಅಭ್ಯಾಸ ಇಲ್ವಾ ಅಂತ ಕೇಳ್ದಾಗ ` ನಾನ್ ಸ್ಕೂಲ್ ಪುಸ್ತಕಾನೇ ಓದಲ್ಲ, ಇದನ್ನೆಲ್ಲಾ ಎಲ್ಲಿ ಓದ್ತೀನಿ’ ಅಂದಿದ್ದೆ. ಅದಕ್ಕವರು, ಇದು ಸ್ಕೂಲ್ ಬುಕ್ಸ್ ತಾರಾ ಅಲ್ಲ ಕಣೋ ದಡ್ಡ. ಇದು ಬುದ್ದಿ ಬೆಳೆಯೋಕೆ, ಪ್ರಪಂಚ ಜ್ಞಾನಕ್ಕೆ ಅಂದಿದ್ರು. ಮೊದಲು ಈ ಪುಸ್ತಕ ಓದು ಅಂತ ನನ್ನ ಕೈಗೊಂಡು ಪುಸ್ತಕ ಕೊಟ್ಟು ಕಳ್ಸಿದ್ರು. ನಾನ್ ಓದಿದಂಗೆ ಅಂತ ಮನಸಲ್ಲೇ ಅನ್ಕೊಂಡು ಮನೆಗೆ ಹೋಗಿ ಅದೆಲ್ಲೋ ಒಂದ್ ಕಡೆ ಬಿಸಾಕ್ದೆ. ಅದಾಗಿ ವಾರ ಬಿಟ್ಟು ಮತ್ತೆ ನಾಗೇಶ್ ಮಾಮ ಕೇಳಿದ್ರು, `ಕೀರ್ತಿ ಆ ಪುಸ್ತಕ ಓದಿದ್ಯೇನೋ’ ಅಂತ. `ಇಲ್ಲ ಮಾಮ ಓದಬೇಕು’ ಅಂತ ಹೇಳ್ದಾಗ, `ಅದು ನಿಮ್ಮಂತ ಹುಡುಗರು ಓದಲೇ ಬೇಕಾದ ಪುಸ್ತಕ ಕಣೋ’ ಅಂತ ಬಯ್ದಿದ್ರು. `ಯಾಕೆ ಈ ಮನುಷ್ಯ ಈ ಪುಸ್ತಕ ಓದಕ್ಕೆ ಇಷ್ಟು ಹಠ ಮಾಡ್ತಿದಾರೆ’ ಅಂತ ಮನಸಲ್ಲೇ ಬಯ್ಕೊಂಡು, ಆಗಿದ್ದಾಗ್ಲಿ ಅಂತ ಅವತ್ತು ರಾತ್ರಿ ಮಲ್ಕೊಂಡು ನಿದ್ದೆ ಕಣ್ಣಲ್ಲಿ ಆ ಪುಸ್ತಕದ ಮೇಲೆ ಕಣ್ಣಾಡಿಸಿದೆ. ಮುನ್ನುಡಿ ಓದ್ತಾ ಇದ್ದ ಹಾಗೆ ನನ್ನ ನಿದ್ದೆ ಹಾರಿ ಹೋಯ್ತು. ಮಲಗಿದ್ದವನು ಎದ್ದು ಕೂತೆ. 198 ಪುಟಗಳ ಪುಸ್ತಕ ಮುಂದಿನ 6-7 ಗಂಟೆಯ ಒಳಗೆ ನನ್ನ ತಲೆಗೆ ಹೊಕ್ಕಿ ಕೂತಿತ್ತು. ಸಿಂಗಲ್ ಸಿಟ್ಟಿಂಗ್ ನಲ್ಲಿ ನಾನು ಆ ಪುಸ್ತಕ ಓದಿ ಮುಗಿಸಿದ್ದೆ. ನಾನು ನನ್ನ ಜೀವನದಲ್ಲಿ ಓದಿದ ಪುಸ್ತಕ ನನ್ನ ರಕ್ತ ಕುದಿಯೋ ಹಾಗೆ ಮಾಡಿತ್ತು. ನನ್ನೊಳಗಿನ ರಾಷ್ಟ್ರ ಪ್ರೇಮಿ ಆ ದಿನ ರೊಚ್ಚಿಗೆದ್ದಿದ್ದ. ಬೆಳಿಗ್ಗೆ ಎದ್ದು ಅಜ್ಜಿ ರೂಮಿನಲ್ಲಿದ್ದ ನೆಹರೂ ಫೋಟೋ ನನ್ನ ಆಕ್ರೋಶಕ್ಕೆ ಬಲಿಯಾಗಿತ್ತು. ಶಾಲಾ ಪುಸ್ತಕಗಳನ್ನು ಬಿಟ್ಟು ಬೇರೆ ಪುಸ್ತಕಗಳನ್ನು ಓದುವ ನನ್ನ ಚಟಕ್ಕೆ ಮುನ್ನುಡಿ ಬರೆದ ಆ ಪುಸ್ತಕ-ಹಿಮಾಲಯನ್ ಬ್ಲಂಡರ್.

ಆ ಪುಸ್ತಕದ ಶಕ್ತಿ ಅಂತದ್ದು, ಆ 198 ಪುಟಗಳ ಪುಸ್ತಕ ನನ್ನ ಪ್ರತಿ ಜರ್ನಿಯ ಸಂಗಾತಿ. ನಾನು ಎಲ್ಲಿಗೆ ಹೋದ್ರೂ, ನನ್ನ ಜೊತೆಗೆ ಯಾವುದೇ ಪುಸ್ತಕವಿದ್ರೂ, ಹಿಮಾಲಯನ್ ಬ್ಲಂಡರ್ ನನ್ನ ಜೊತೆಗಿರುತ್ತೆ. ಇಲ್ಲೀ ತನಕ ಕನಿಷ್ಠ ೧೫ ಸಲ ನಾನು ಆ ಪುಸ್ತಕವನ್ನ ಓದಿದ್ದೇನೆ. ಆ ಪುಸ್ತಕದ ಇಂತದ್ದೇ ಪುಟದಲ್ಲಿ ಇದರ ಬಗ್ಗೆನೇ ಇದೆ ನಾನು ಹೇಳಬಲ್ಲೆ. ಅಷ್ಟರ ಮಟ್ಟಿಗೆ ಅದು ನನ್ನೊಳಗೆ ಬೆರೆತು ಹೋಗಿದೆ. ಅಷ್ಟಕ್ಕೂ ಆ ಪುಸ್ತಕದಲ್ಲಿ ಏನಿದೆ…? ಅದು 1962ರ ಭಾರತ-ಚೈನಾ ಯುದ್ದದ ಚಿತ್ರಣ. ಭಾರತ ಆ ಯುದ್ದವನ್ನ ಹೀನಾಯವಾಗಿ ಸೋತಿದ್ಯಾಕೆ ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಡತ್ತೆ ಆ ಪುಸ್ತಕ. ಆ ಯುದ್ದದಲ್ಲಿ ಭಾರತೀಯ ಸೈನಿಕರು ಪಟ್ಟ ಪಾಡು, ಎರಡೂ ಕಾಲಿಗೆ ಬಲಗಾಲಿನ ಶೂ ಹಾಕಿ ಅವರು ಮಾಡಿದ ಯುದ್ದ, ಹೊಟ್ಟೆಗೆ ಹಿಟ್ಟಿಲ್ಲದೆ ಕಡೆಯ ಬುಲೆಟ್ ಶತ್ರುವಿನೆಡೆಗೆ ಹಾರಿಸುವ ತನಕ ಅವರು ನಡೆಸಿದ ಹೋರಾಟ, ಹಿಮದ ಬೀಡಲ್ಲಿ ಹರಿದ ರಕ್ತದೋಕುಳಿ, ಚೈನಾ ಸೈನಿಕರ ಅಟ್ಟಹಾಸ, ಎಲ್ಲವನ್ನೂ ಕಿಚ್ಚೆಬ್ಬಿಸುವಂತೆ ನಮ್ಮೆದುರು ಒಂದೊಂದೇ ಪುಟವಾಗಿ ತೆರೆದುಕೊಳ್ಳುವ ಪುಸ್ತಕ ಹಿಮಾಲಯನ್ ಬ್ಲಂಡರ್.

ಆ ಯುದ್ದದ ಸಂಧರ್ಭದಲ್ಲಿ ಬ್ರೆಗೆಡಿಯರ್ ಆಗಿದ್ದ ಜಾನ್ ಪಿ ದಳವಿ ತಾವು ಪಟ್ಟ ಪಾಡನ್ನ ಹೇಳುವುದರ ಜೊತೆಗೆ ಆ ಸಮಯದಲ್ಲಿ ದೇಶ ಆಳುತ್ತಿದ್ದ ರಾಜಕಾರಣಿಗಳ ಬಣ್ಣ ಬಯಲು ಮಾಡುತ್ತಾರೆ. ಅಷ್ಟು ದೊಡ್ಡ ಶತ್ರು ರಾಷ್ಟ್ರ ನಮ್ಮ ಮೇಲೆ ಎರಗಿ ಬರುವಾಗ ನಮ್ಮ ದೇಶದ ಪ್ರಧಾನಿ ಆ ಯುದ್ದಕ್ಕೆ ಹೇಗೆ ಸಿದ್ದವೇ ಆಗಿರದೆ `ಇಂಡಿಯ-ಚೀನಾ ಭಾಯಿ ಭಾಯಿ’ ಅಂತ ಓಡಾಡ್ತಿದ್ರು ಅನ್ನೋದನ್ನ ನಮಗೆ ತಿಳಿಸಿಕೊಡ್ತಾರೆ. ಹೇಗೆ ನಮ್ಮ ಸೈನ್ಯದ ಅಧಿಕಾರಿಗಳು ಚೀನಾದ ಯುದ್ದ ಕೈದಿಗಳಾಗಿ ಯಮ ಯಾತನೆ ಅನುಭವಿಸಿದರು ಅನ್ನೋದನ್ನ ತಿಳಿಸಿಕೊಡ್ತಾರೆ. ಇದೆಲ್ಲದರ ಜೊತೆಗೆ ನಮ್ಮ ದೇಶಕ್ಕಾದ ಅವಮಾನವನ್ನ ಸಹಿಸಲಾಗದ ಪರಿಸ್ಥಿತಿಯ ಚಿತ್ರಣ ಕೊಡ್ತಾರೆ. ಅದೆಲ್ಲವನ್ನೂ ನಿಜವಾಗಿ ಅನುಭವಿಸಿದಂತಾಗೋದು ಜಾನ್ ಪಿ ದಳವಿ ಅವರ ಪುಸ್ತಕವನ್ನ ನಮ್ಮದೇ ಕನ್ನಡ ಭಾಷೆಯಲ್ಲಿ ಓದಿದಾಗ. ಹಿಮಾಲಯನ್ ಬ್ಲಂಡರ್ ಪುಸ್ತಕವನ್ನ ಅದೇ ಹೆಸರಿನಲ್ಲಿ ಕನ್ನಡಿಗರಿಗೆ ಉಡುಗೊರೆಯಾಗಿ ನೀಡಿದ್ದಾರೆ ಹಿರಿಯ ಪತ್ರಕರ್ತ ರವಿ ಬೆಳಗೆರೆಯವರು. ಅವರಿಗೆ ಎಲ್ಲ ಕನ್ನಡಿಗರ ಪರವಾಗಿ ಕೋಟಿ ಕೋಟಿ ಥ್ಯಾಂಕ್ಸ್…

ಇಲ್ಲಿಯ ತನಕ ಈ ಪುಸ್ತಕವನ್ನ ನಾನು 16  ಜನರಿಗೆ ಉಡುಗೊರೆಯಾಗಿ ನೀಡಿದ್ದೇನೆ. ಆ ಪುಸ್ತಕ ಯಾರಿಗೆ ಕೊಟ್ಟರೂ ನಾನು ವಾಪಸ್ ಇಸ್ಕೊಳಲ್ಲ. ಅದರ ಬದಲಿಗೆ ಇನ್ಯಾರಿಗಾದ್ರೂ ಆ ಪುಸ್ತಕವನ್ನು ಓದೋಕೆ ಕೊಡಲು ಹೇಳ್ತೀನಿ. ಅಷ್ಟರ ಮಟ್ಟಿಗೆ ಅದು ಪ್ರತಿ ಭಾರತೀಯನೂ ಓದಲೇ ಬೇಕಾದ ಪುಸ್ತಕ. ಮೊನ್ನೆ ಊರಿಗೆ ಹೋದಾಗ ಮತ್ತೆ ಅದನ್ನ ಕಂಪ್ಲೀಟ್ ಆಗಿ ಓದಿದ ಮೇಲೆ ನನ್ನ ಬ್ಲಾಗ್ ನಲ್ಲಿ ಅದರ ಬಗ್ಗೆ ಬರೀಬೇಕು ಅನ್ನಿಸಿ ಬರೀತಿದೀನಿ. ಆ ಪುಸ್ತಕದ ಬೆಲೆ ಬರೀ 125 ರುಪಾಯಿ. ಆದ್ರೆ ಅದರಲ್ಲಿನ ಪ್ರತಿ ಅಕ್ಷರ ಲಕ್ಷ ಲಕ್ಷ ಬೆಲೆ ಬಾಳುತ್ತೆ. ನಿಮ್ಮೊಳಗೊಬ್ಬ ರಾಷ್ಟ್ರಪ್ರೇಮಿ ಇದ್ರೆ, ಅಂದಿನ ಯುದ್ದದ ಚಿತ್ರಣಗಳು ಕಣ್ಣಿಗೆ ಕಟ್ಟಬೇಕಾದರೆ, ಅವತ್ತಿನ ಹೊಲಸು ರಾಜಕೀಯ ವ್ಯವಸ್ಥೆ ಬಗ್ಗೆ ತಿಳ್ಕೊಬೇಕು ಅಂದ್ರೆ ಈಗಲೇ ಹತ್ತಿರದ ಬುಕ್ ಶಾಪ್ ಗೆ ಹೋಗಿ ಆ ಪುಸ್ತಕ ತಂದು ಓದಲು ಕೂತ್ಕೊಳಿ. ನಾನು ಚಾಲೆಂಜ್ ಮಾಡ್ತೀನಿ`ನೀವೂ ಆ ಪುಸ್ತಕವನ್ನ ಸಿಂಗಲ್ ಸಿಟ್ಟಿಂಗ್ ನಲ್ಲಿ ಓದಿ ಮುಗಿಸ್ತೀರಿ…’ಯಾಕಂದ್ರೆ ಇದು `ಸಹಸ್ರ ಯೋಧರ ನೆತ್ತರಗಾಥೆ…’

ಭಗ್ನ ದಂತದ ಕಥೆ-ವ್ಯಥೆ

ಮಂತ್ರಿ ಮಾಲ್ ನ ಯೂನಿವರ್ಸಲ್ ಶಾಪ್ ನಲ್ಲಿ ನೋಕಿಯಾದ ಯಾವ್ದೋ ಹೊಸ ಮೊಬೈಲ್ ನೋಡ್ತಾ ಇದ್ದೆ. ಮುಂದಿನ ಹಲ್ಲಿಗೆ ಏನೋ ಸಿಕ್ ಹಾಕ್ಕೊಂಡಿದೆ ಅನ್ನಿಸ್ತು. ನಾಲಿಗೆಯಿಂದ ಹೊರ ತೆಗೆಯೋ ಪ್ರಯತ್ನ ಮಾಡ್ದೆ. ಉಪಯೋಗ ಆಗ್ಲಿಲ್ಲ, ಹಾಗಾಗಿ ಕಿರುಬೆರಳಿನ ತೆಳು ಉಗುರಿನಿಂದ ಹಲ್ಲಿನ ಗ್ಯಾಪ್ ಗೆ ಕೈ ಹಾಕ್ದೆ. `ಓ ಮೈ ಗಾಡ್’ ಕೈಗೆ ಬಂದಿದ್ದು ನನ್ನ ಮುಂದಿನ ಹಲ್ಲಿನ ಮಧ್ಯ ಭಾಗ. ಶಿವನೆ ಶಂಭು ಲಿಂಗ. ಪಕ್ಕದಲ್ಲಿದ್ದ ನನ್ನ ಫ್ರೆಂಡ್ ಗೆ ಹಲ್ಕಿರಿದು ಕೇಳ್ದೆ ಏನಾಗಿದೆ ನೋಡು ಅಂತ. ಅವಳ ಮುಖದಲ್ಲೋ ಆಶ್ಚರ್ಯ, ಅಸಹ್ಯ!  `ಅಯ್ಯೋ ಹಲ್ಲು ಮುರಿದಿದೆ ಕಣೋ ‘ ಅಂದ್ಲು. ತಕ್ಷಣ ಅಲ್ಲಿಂದ ಹೊರಟವನು ಮಲ್ಲೇಶ್ವರಂ ಕಡೆ ಬೈಕ್ ತಿರುಗಿಸ್ದೆ. ಅಲ್ಲೊಂದು ಡೆಂಟಲ್ ಕ್ಲಿನಿಕ್ ಬೋರ್ಡ್ ಕಣ್ಣಿಗೆ ಬಿತ್ತು. ಪಟ ಪಟ ಅಂತ ಓಡಿ ಹೋಗಿ ಹೆಸರು ಬರೆಸಿ ಕೂತವನಿಗೆ ಒಳಗೊಳಗೇ ತಳಮಳ,ಏನಾಗುತ್ತೋ ಅಂತ. ಅಲ್ಲಿ ಕೂತವನಿಗೆ ಸುಮ್ಮನೆ ಕೂರಲಾಗದೆ ಆ ಪುಡಿಯಾಗಿದ್ದ ಹಲ್ಲನ್ನ ಮತ್ತೆ ಅದೇ ಜಾಗಕ್ಕೆ ಸೇರಿಸಲು ಪ್ರಯತ್ನಿಸಿ ಸಕ್ಸಸ್ ಆದೆ. ಆ ಗ್ಯಾಪ್ ಫಿಲ್ ಮಾಡಿಬಿಟ್ಟಿದ್ದೆ ನಾನು. ಅದಾಗಿ 2 ನಿಮಿಷಕ್ಕೆ ಆ ತೆಳ್ಳಗಿನ ಹುಡುಗಿಯೊಬ್ಬಳು  `ಬನ್ನಿ ಕೀರ್ತಿ’  ಅಂತ ಒಳಗೆ ಕರೆದಳು. ಒಳಗೆ ಹೋಗಿ ಕೂತ ತಕ್ಷಣ `ವಾಟ್ಸ್ ಯುವರ್  ಪ್ರಾಬ್ಲಂ ‘ಅನ್ನೋ ಹಾಗೆ ಮುದ್ದಾಗಿ ಕೇಳಿದಳು. ನಾನು `ಹಿಂಗಿಂಗೆ, ಹಿಂಗಿಂಗೆ, ಹಂಗಾಗಿ ನಾನ್ ಇಲ್ಲಿಗೆ ‘ ಅಂತೆಲ್ಲಾ ಹೇಳ್ದೆ. ಅವಳು ಆ ಫಿಲ್ ಆಗಿದ್ದ ಮುರಿದ ಹಲ್ಲನ್ನ ತೆಗೆಯೋಕೆ ಎಷ್ಟೇ ಪ್ರಯತ್ನ ಪಟ್ರೂ ಆಗ್ಲಿಲ್ಲ. ಒಂದು ಹತ್ತು ನಿಮಿಷ ಹೊರಗಿರಿ, ಎರಡು ಹಲ್ಲು ಡ್ಯಾಮೇಜ್ ಆಗಿದೆ 1100 ರೂಪಾಯ್ ಆಗುತ್ತೆ ಓಕೆ ನ ಅಂತ ಕೇಳಿದಳು.` ಅಯ್ಯೋ ತಾಯಿ ಖರ್ಚಿನ ಚಿಂತೆ ಬಿಡು ಮೊದಲು ನನ್ನ ಹಲ್ಲು ಸರಿ ಮಾಡು’ ಅನ್ನೋ ಹಾಗೆ ಮುಖ ನೋಡಿ ಹೊರಗೆ ಬಂದು ಕೂತು ಮತ್ತೆ ನನ್ನ ಕಿರುಬೆರಳ ಉಗುರನ್ನ ಹಲ್ಲಿನ ಗ್ಯಾಪ್ ಗೆ ಹಾಕ್ದೆ. ಮತ್ತೆ ಆ ಮುರಿದ ಹಲ್ಲು ನನ್ನ ಕೈ ಸೇರಿತ್ತು. ಸರಿ ಇನ್ನು ಮಂಗಾಟ ಬೇಡ ಅನ್ಕೊಂಡು ಹಲ್ಲನ್ನ ಕೈಲಿ ಹಿಡಿದು ಒಳಗೆ ಹೋದವನಿಗೆ ಆ ಹಲ್ ಕೀಳೋ ಚೇರ್ ಮೇಲೆ ಕೂರಕ್ ಹೇಳಿದ್ರು.

Scared Keerthi in Dental Clinic

ಈಗ ಬಂದವಳು ಬೇರೆ ಹುಡುಗಿ. ಮೊದಲು ಚೆಕ್ ಮಾಡಿದವಳೇ ನೋಡಕ್ ಚೆನ್ನಾಗಿದ್ಳು. ಆದ್ರೆ ಅವಳು ಜ್ಯೂನಿಯರ್, ಅವಳೇ ಟ್ರೀಟ್ಮೆಂಟ್ ಕೊಟ್ಟಿದ್ರೆ ನನ್ನ ಹಲ್ಲು ಅಪ್ಪನಾನೆ ಸರಿ ಆಗ್ತಿರ್ಲಿಲ್ಲ  ಅನ್ನೋದು ಆಮೇಲ್ ಗೊತ್ತಾಯ್ತು. ಅದೇನೇ ಇರ್ಲಿ ಈಗ ಬಂದಾಕೆ ಆಶಾ ಅಂತ ಗೊತ್ತಾಗೋಕೆ ಜಾಸ್ತಿ ಹೊತ್ತು ಬೇಕಾಗಲಿಲ್ಲ. ಈ ಆಶಾ ಬಾಳ ಬಯ್ತಾಳಪ್ಪ. ಹಲ್ಲಿಗೆ ಹತ್ತಿ, ಅದು ಇದು ಎಲ್ಲಾ ತುರುಕಿ `ಏನ್ರಿ ಬೇಗ ಬರಕ್ಕಾಗಲ್ವ, ಗಂಟೆ 9 ಆಯ್ತು. ನಾವ್ ಮನೆಗ್ ಹೋಗೋದ್ ಬೇಡ್ವ ‘ ಅಂತೆಲ್ಲಾ ಬಯ್ತಾನೆ ಇದ್ಲು. ನಾನು ಏನು ಮಾತಾಡೋ ಹಾಗೂ ಇಲ್ಲ. ನನ್ನ ಬಾಯಿಗೆ ಆಸ್ಪತ್ರೇಲಿ ಇರೋದನ್ನೆಲ್ಲ ತುರುಕಿ ಕೂರ್ಸಿದಾಳೆ. `ಆ ‘ಅಂದ್ರು ಬಯ್ತಾರೆ, `ಊ’ ಅಂದ್ರು ಬಯ್ತಾಳೆ. ಕರ್ಮ ಅನ್ಕೊಂಡು ನನ್ನ ಮೊಬೈಲ್ ನಲ್ಲಿ ಮೆಸೇಜ್ ಟೈಪ್ ಮಾಡಿ ಮಾಡಿ ಅವಳ ಜೊತೆ communicate ಮಾಡ್ದೆ. ಸರಿ ಸರಿ ಅಂತ ಅದೇನೇನೋ ಆಯುಧಗಳನ್ನ ಹಿಡ್ಕೊಂಡ್ ಬಂದ್ಲಪ್ಪ, ನನ್ ಮೀಟರ್ ಆಫ್ ಆಗಿದ್ದು ಅವಾಗ್ಲೇ. `ಆ’ ಮಾಡಿ ಅಂತ ಆ ಡ್ರಿಲ್ಲಿಂಗ್ ಮಿಶಿನ್ ನ ಬಾಯೊಳಗೆ ಹಾಕಿ ಗಿರ್ರ್ ಅನ್ಸಿದ್ಲಪ್ಪ,ಬಳ್ಳಾರಿ ಗಣಿ ನೆನಪಾಗಿ ಹೋಯ್ತು.  ನೂರ್ ಲೋಕ ಕೂತ ಜಾಗದಲ್ಲೇ ನೋಡಿದ ಹಂಗಾಗಿತ್ತು ನಂಗೆ. ಆ ತಾಯಿ ಬಯ್ತಾ ಬಯ್ತಾ ನನ್ನ ಹಲ್ಲು ಕೊರೀತಾನೆ ಇದ್ಲು. ನೋವಾಗ್ತಾ ಇದ್ದೀಯ ಅಂತ ಕೇಳ್ತಾ ಕೇಳ್ತಾ `ಹೂ’ ಅಂದಾಗೆಲ್ಲ `ಸ್ವಲ್ಪ ಹೊತ್ತು ಸ್ವಲ್ಪ ಹೊತ್ತು ‘ಅಂತ ಕೊರೀತಾನೆ ಇದ್ಲು. ಕೊನೆಗೆ ಅದೇನೋ ಫೆವಿಕಾಲ್ ತರದ್ದೊಂದು ಗಮ್ ತಂದು ಸೂಜಿ ತರದ ಆಯುಧದ ತುದಿಗೆ ತಾಗಿಸಿ ನನ್ನ ಬಾಯೊಳಗೆ ತುರುಕ್ತಾ ಇದ್ಲು. ನನಗೇನು ಗೊತ್ತಾಗ್ತಾ ಇಲ್ಲ. ನನ್ನ ಬಾಯಿ, ಹಲ್ಲು ಎಲ್ಲ ಅವಳ ಕೈಗೆ ಕೊಟ್ಟು ಶಸ್ತ್ರ ದಾನ ಮಾಡಿದವನ ಹಾಗೆ ಕೂತಿದ್ದೆ. ಒಂದು ಗಂಟೆ ಸರ್ಕಸ್ ಮಾಡಿ ಬಾಯಿಗೆ ತುರುಕಿದ್ದ ಗುಜರಿ ಐಟಂ ಎಲ್ಲ ಹೊರಗ ತೆಗೆದ್ಲಪ್ಪ. ನಂಗೆ ಅವಾಗ್ಲು ಬಾಯ್ ಮುಚ್ಚೋಕ್ ಆಗ್ತಿಲ್ಲ. ಅಷ್ಟು ಹೊತ್ತು ಬಾಯಿ ತೆರೆದಿಟ್ಟಿದ್ದರ ಪರಿಣಾಮ ಅದು. ಇಷ್ಟೆಲ್ಲಾ ಮುಗಿಯೋದ್ರೊಳಗೆ ಗಂಟೆ ಹತ್ತಾಗಿತ್ತು. ಎರಡು ಹಲ್ಲಿಗೂ ಫಿಲ್ಲಿಂಗ್ ಮಾಡಿ, ಬೆಳಿಗ್ಗೆ ಬನ್ನಿ ಪಾಲಿಶ್ ಮಾಡ್ತೀನಿ. ಜಾಸ್ತಿ ಮಾತಾಡಬೇಡಿ, ಸಾಂಬಾರ್ ತಿನ್ಬೇಡಿ, ಓನ್ಲಿ ಮೊಸರನ್ನ ಅಂತೆಲ್ಲ ವಾರ್ನಿಂಗ್ ಮಾಡಿ ಕಳ್ಸಿದ್ಲು. ಸರಿ ತಾಯಿ ಅನ್ಕೊಂಡು ಆಫೀಸಿಗೆ ಹೋದೆ.

ಮಾರನೆ ದಿನ ಬೆಳಗ್ಗೆ ಮತ್ತೆ ಅವಳ ಹತ್ರ ಹೋಗಿ ಕೂತೆ. ಸರಿ ಕೂತ್ಕೊಳಿ ಅಂತ ಹೇಳಿ ಮತ್ತೆ ಈಗ ಡ್ರಿಲ್ಲಿಂಗ್ ಮಿಶಿನ್ ತರದ್ದೇ ಪಾಲಿಶ್ ಮಿಶಿನ್ ತಗೊಂಬಂದು ಹಲ್ಲನ್ನ ಪಾಲಿಶ್ ಮಾಡ್ತಾ ಇದ್ರೆ ನಂಗೆ ನಮ್ ಮನೆ ಕಟ್ಟಬೇಕಾದರೆ ಟೈಲ್ಸ್ ಪಾಲಿಶ್ ಮಾಡ್ತಾ ಇದ್ದಿದ್ದು ನೆನಪಾಗ್ತಾ ಇತ್ತು. ತಾಯಿ, ಒಂದರ್ಧ ಗಂಟೆ ಒಳಗೆ ಮಿಶಿನ್ ನಲ್ಲಿ ಮಾಡಿದ ಪಾಲಿಶ್ ಮುಗಿಸಿ ಸಾಲ್ಟ್ ಪೇಪರ್ ತರದ ವಸ್ತು ಏನನ್ನೋ ತಂದು ಹಲ್ಲಿಗೆ ಹಾಕಿ ತಿಕ್ತಾ ಇದ್ರೆ ನಂಗೆ ನನ್ನ ಹಲ್ಲಿನ ಮೇಲೆ ನಖಶಿಖಾಂತ ಕೋಪ ಉಕ್ಕುತಾ ಇತ್ತು. ಹೆಂಗೋ ಅಷ್ಟೆಲ್ಲ ಪ್ರಯತ್ನದ ಫಲವಾಗಿ ಅವಳು ನನ್ನ ಕೈಗೆ ಕನ್ನಡಿ ಕೊಟ್ಟು` ನೋಡ್ಕೊಳಿ’ ಅಂದಾಗ ನನ್ನ ಹಲ್ಲು ಮೊದಲಿನ ಹಾಗೇ ಆಗಿತ್ತು ಅನ್ನೋದಷ್ಟೇ ಸಮಾಧಾನದ ವಿಚಾರ.

ಇಷ್ಟೆಲ್ಲಾ ಚೆನ್ನಾಗಿ ಸರಿ ಮಾಡಿದಾಳೆ. ಮೊದಲೇ ನನ್ನ ಹಲ್ಲಿನ ಸಮಸ್ಯೆ ಜಾಸ್ತಿ. ಎಲ್ಲಾ ಹಲ್ಲೂ ಸರಿ ಮಾಡ್ಸಿ ಬಿಡೋಣ ಅನ್ಕೊಂಡು ಟೋಟಲ್ ಪ್ಯಾಕೇಜ್ ಲೆಕ್ಕದಲ್ಲಿ ಎಷ್ಟ್ ಖರ್ಚಾಗ್ಬೋದು ಹೇಳ್ತೀರಾ ಅಂದೇ. ಫುಲ್ ಕುಶೀಲಿ ಅವರ ಸೀನಿಯರ್ ಮೇಡಂ ಒಬ್ಬರನ್ನ ಕರೆದು ಮೇಡಂ `ಯಾವ್ದೋ ಕುರಿ ಕಡೀರಿ’ ಅನ್ನೋ ಹಾಗೇ ನನ್ನ ಹಲ್ಲುಗಳನ್ನ ತೋರ್ಸಿದ್ಲು. ಅವರೂ ಎಲ್ಲಾ ನೋಡಿ ಮತ್ತೊಬ್ಬ ಬ್ಯೂಟಿಫುಲ್ ಹುಡುಗಿ ಕೈಲಿ ಎಲ್ಲ ಸೇರಿ ಎಷ್ಟಾಗುತ್ತೆ ಅಂತ ಬರೆದು ಕಳ್ಸಿದ್ರು. 2 ಹಲ್ಲು ರೂಟ್ ಕೆನಲ್, 3 ಫಿಲ್ಲಿಂಗ್, 2 ಬ್ರಿಡ್ಜ್, 5 ಕ್ಯಾಪ್ ಎಲ್ಲಾ ಸೇರಿ 28 ರಿಂದ ಮೂವತ್ತು ಸಾವಿರ!!!! ಎಲ್ಲ ತೆಗ್ಸಿ ಸೆಟ್ ಹಾಕಿಸಿ ಬಿಡೋಣ ಅನ್ನೋ ಅಷ್ಟು ಕೋಪ ಬಂದಿತ್ತು. ಆದರೂ ನನ್ನ ಹೆಂಡತಿ ಆಗೊಳನ್ನ ನೆನಸ್ಕೊಂಡು ಇವತ್ತಲ್ಲ ನಾಳೆ ಮಾಡ್ಸಿದ್ರಾಯ್ತು ಅನ್ಕೊಂಡು ಅಲ್ಲಿಂದ ಕಾಲು ಕಿತ್ತೆ. ನನ್ನ ಜೊತೆಗೆ ಬಂದಿದ್ದ ನನ್ನ ಫ್ರೆಂಡ್ ರವಿ,` ಏನಣ್ಣ, ಒಂದು ತಿಂಗಳ ಸಂಬಳ ಪೂರ್ತಿ ಹಲ್ಲು ರೆಡಿ ಮಾಡ್ಸೋಕೆ ಬೇಕಲ್ಲ’ ಅಂತ ರೇಗಿಸ್ತಿದ್ದ. ನಾನು ರೆಡಿಯಾದ ಹಲ್ಲನ್ನ ನಾಲಿಗೆಯಲ್ಲಿ ಸವರುತ್ತಾ , ಎಲ್ಲ ನಿನ್ನಿಂದಾನೆ ಆಗಿದ್ದು ಅಂತ ಶಾಪ ಹಾಕ್ತಾ ಇದ್ದೆ. ಈಗ ಮನಸ್ಸಿನೊಳಗೆ  ಒಂದೇ ಪ್ರಶ್ನೆ, ` 30 ಸಾವಿರ ಕೊಟ್ಟು ಹಲ್ಲು ಸರಿ ಮಾಡಿಸಬೇಕಾ?’

ಬ್ಬಕ್ಕೆ ಊರಿಗೆ ಹೋಗಿದ್ದೆ… ಹಬ್ಬದ ಹೆಸರು ದೀಪಾವಳಿ.. ಆದ್ರೆ ಊರವರೆಲ್ಲ ಹೊಡೀತಿದ್ದ ಪಟಾಕಿ ಹಾವಳಿ ಬಿಟ್ರೆ ಹಬ್ಬದಲ್ಲಿ  ಗತ್ತು ಗಮ್ಮತ್ತು ಏನು ಕಾಣಿಸಲೇ ಇಲ್ಲ. ನಾನು 3-4 ವರ್ಷದಿಂದ ದೀಪಾವಳಿ ಹಬ್ಬಕ್ಕೆ ಊರಿಗೆ ಹೋದವನಲ್ಲ. ನಾನ್ ಯಾವ ಮನೇಲಿ ಬಾಡಿಗೆಗೆ ಇರ್ತೀನೋ ಆ ಓನರ್ ಮನೇಲೆ ನನ್ನ ದೀಪಾವಳಿ ಹಬ್ಬ ಮುಗಿದು ಹೋಗ್ತಿತ್ತು. ಆದ್ರೆ ಈ ಸಲ ಹಾಗಾಗಬಾರದು ಅಂತ ನನ್ನ ತಂಗಿಯ ಕಣ್ಣೀರಿನ ಆಹ್ವಾನಕ್ಕೆ ಕರಗಿ ಊರಿಗೆ ಹೋಗಿದ್ದೆ. ಆದ್ರೆ ನಾನ್ ನೋಡಿದ, ನಾನ್ ನಿರೀಕ್ಷಿಸಿದ್ದ ದೀಪಾವಳಿ ಇದಲ್ಲ ಅಂತ ನಂಗೆ ಹೋದ ಸ್ವಲ್ಪ ಹೊತ್ತಿಗೇ ಗೊತ್ತಾಗಿ ಬಿಡ್ತು.

ಯಾಕೆ ಹೀಗೆ ಅಂದ್ರ..? ಇನ್ನೀನ್ರಿರಿ… ಇನ್ನೂ ನೆನಪಿದೆ ನಂಗೆ ಅಜ್ಜಿ ಮನೆಯ ಆ ದೀಪಾವಳಿ. ಹಬ್ಬದ ಹಿಂದಿನ ದಿನ ಮನೆ ಮನೆಗೆ ಬರ್ತಿದ್ದ ಅಂಟಿಗೆ ಪಿಂಟಿಗೆಯವರು, ಅವರ ಜೊತೆಯಲ್ಲಿ ಬರುತ್ತಿದ್ದ ಹುಲಿ ವೇಷಧಾರಿಗಳು. ಅಮ್ಮನ ಸೆರಗ ಹಿಂದೆ ಅವಿತು ಬೆದರಿದ ಕಂಗಳು ಅವರನ್ನ ನೋಡ್ತಾ ಇದ್ದಿದ್ದು ಈಗೆಲ್ಲಿದೆ?  ಹಬ್ಬದ ಹಿಂದಿನ ದಿನ ನಮ್ಮ ಮನೆಯಲ್ಲಂತೂ ಎಲ್ಲರೂ ಗಡದ್ದಾಗಿ ನಿದ್ದೆ ಮಾಡ್ತಿದ್ರು. ನಮ್ಮ ಮನೇಲಿ ಮಾತ್ರ ಅಲ್ಲ, ಎಲ್ಲರ ಮನೇಲೂ ಗೊರಕೆಯದ್ದೇ ಅಟ್ಟಹಾಸ.

ನಂಗೆ ಅಜ್ಜಿ ಮನೆಯಲ್ಲಿ ಮಾಡ್ತಿದ್ದ ಆ ದಿನಗಳ ದೀಪಾವಳಿ ನೆನಪು ಮಾಡ್ಕೊಬೇಕು ಅನ್ನಿಸ್ತು. ಅವತ್ತಿನ ಹಬ್ಬ ಎಲ್ಲ ಕನಿಷ್ಠ 3-4 ದಿನದ ಸಂಭ್ರಮ. ಒಂದೊಂದು ದಿನಕ್ಕೂ ಒಂದೊಂದು ವಿಶೇಷ. ನಮ್ಮ ಫ್ಯಾಮಿಲಿ, ಚಿಕ್ಕಪ್ಪ-ಚಿಕ್ಕಮ್ಮಂದಿರು, ದೊಡ್ಡಪ್ಪ-ದೊಡ್ಡಮ್ಮ, ಅವರ ಮಕ್ಕಳು, ದೂರದ ಬಾಂಬೆಯಿಂದ ಚಾಕಲೇಟು, ಬಿಸ್ಕೆಟ್ಟು, ಹೊಸ ಬಟ್ಟೆ ತರ್ತಿದ್ದ ಮಾವ ಎಲ್ಲರೂ ಸೇರಿ ಹಬ್ಬ ಆಚರಿಸೋ ಆ ಮಜಾನೆ ಬೇರೆ ಇತ್ತು. ಎಲ್ಲರೂ ಸೇರಿ ಎಣ್ಣೆ ಸ್ನಾನ ಮಾಡೋದೇನು, ವರ್ಷದಲ್ಲಿ ನಡೆದಿದ್ದನ್ನೆಲ್ಲಾ ಮೆಲುಕು ಹಾಕೋದೇನು, ಹೋಳಿಗೆ ಹೂರಣ ಕದ್ದು ಅಜ್ಜಿ ಹತ್ರ ಬೈಸಿಕೊಲ್ಲೋ ಮಜಾ,  ಮೋಟುದ್ದ ಪಟಾಕಿ ಹಿಡಿದು ಅದನ್ನ ಹಚ್ಚೋಕೆ ನಾವೆಲ್ಲಾ ಒದ್ದಾಡ್ತಾ ಇದ್ದಿದ್ದು, ದೊಡ್ಡಣ್ಣ ಅದನ್ನ ಕಿತ್ಕೊಂಡು ಢಂ ಅನ್ನಿಸಿದಾಗ ಧಾರಾಕಾರವಾಗಿ ಕಂಗಳಿಂದ ಬರ್ತಿದ್ದ ನೀರು… ಅಜ್ಜನಿಗಿಡ್ತಿದ್ದ ಎಡೆ, ತುಳಸಿ ಗಿಡದ ಸುತ್ತಲಿನ ದೀಪಗಳು, ಗದ್ದೆ ಬದಿಯಲ್ಲಿ ನೆಟ್ಟು ಬರ್ತಿದ್ದ ದೀಪದ ದೊಂದಿಗಳು. `ದೀಪ್ ದೀಪೋಳ್ಗೆ’ ಅಂತ ಕೂಗ್ತಿದ್ದ ಕೂಗುಗಳು.   ವಾ ವಾ ಆ ತರದ ದೀಪಾವಳಿ ಇನ್ಯಾವತ್ತೂ ನನ್ನ ಜೀವನದಲ್ಲಿ ಮರಳಿ ಬರೋಕೆ ಸಾಧ್ಯಾನೇ ಇಲ್ಲ. ಆ ದಿನಗಳನ್ನ ನಾನ್ಯಾಕೋ ತುಂಬಾ ಮಿಸ್ ಮಾಡ್ಕೊಳ್ತಾ ಇದ್ದೀನಿ ಅನ್ನಿಸ್ತಿದೆ.

ನಂಗೆ ಇನ್ನೂ ನೆನಪಿದೆ, ಅದರ ಹೆಸರು ಗೋ ಪೂಜೆ ಅಂತ. ಮನೇಲಿರೋ ದನ ಕರುಗಳಿಗೆಲ್ಲ ತಿಕ್ಕಿ ಸ್ನಾನ ಮಾಡಿಸಿ ಅರಿಶಿನ ಕುಂಕುಮ ಇಟ್ಟು, ಲೋಟದ ಮೇಲ್ಬಾಗಕ್ಕೆ ಬಣ್ಣ ಅದ್ದಿ ಅವುಗಳ ಮೈ ಮೇಲೆಲ್ಲಾ ಹಚ್ಚಿ, ಕೋಡಿಗೆ ರಿಬ್ಬನ್ ಕಟ್ಟಿ , ಬಾಳೆಹಣ್ಣು ಕುತ್ತಿಗೆಗೆ ಕಟ್ಟಿ ಅವುಗಳ ಎದುರು ಪಟಾಕಿ ಹೊಡೆದು ಬೆದರಿಸಿ ಓಡಿಸೋದಿದ್ಯಲ್ಲ, ಅದರ ಮಜಾನೆ ಬೇರೆ. ಆಮೇಲೆ ಯಾರ್ ಯಾರದೋ  ಮನೆಯ ದನದ ಕುತ್ತಿಗೆಯಲ್ಲಿದ್ದ ಬಾಳೆ ಹಣ್ಣು ಕಿತ್ತು ತಿಂದ್ರಂತೂ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಸಂಭ್ರಮ. ಆ ಮಜಾ ಈಗೆಲ್ಲಿದೆ?

ಈ ಸಲದ ದೀಪಾವಳಿ ಕೇಳಿ ಹೇಗಿತ್ತು ಅಂತ. ಮನೆಗೆ ಮಗಾ ಬಂದಿದ್ದು ನಮ್ಮಂಗೆ ಹಬ್ಬಕ್ಕಿಂತ ದೊಡ್ಡ ಸಂಭ್ರಮ. ನನ್ನ ಜೊತೆಗೆ ಈ ಸಲದ ಹಬ್ಬಕ್ಕೆ ನನ್ನ ಗೆಳೆಯ ಮುದ್ದೀನು ಕರ್ಕೊಂಡ್ ಹೋಗಿದ್ದೆ, ಬಾರೋ ನಮ್ಮನೇಲಿ ಹಬ್ಬ ಮಾಡೋಣ ಅಂತ.ಊರಿಗೆ ಹೋದ ದಿನ ಪೂರ್ತಿ ನಾನು ಅವರಿವರ ಮನೆಗೆ ಹೋಗಿ ಮಾತಾಡಿಸ್ಕೊಂಡು ಬರೋದ್ರಲ್ಲೇ ಕಳೆದು ಹೋಯ್ತು. ಸಂಜೆ  ಹಬ್ಬ ಬದಿಗಿಟ್ಟು ನಮ್ಮಮ್ಮ ಮಗನಿಗೆ ಇಷ್ಟ ಅಂತ ಕಬಾಬ್, ನೀರ್ ದೋಸೆ, ಚಿಕನ್ ಗ್ರೇವಿ, ಅದೂ ಇದೂ ಅಂತ ಮಾಡಿದ್ರು. ದೇವರ ಕೋಣೆಯಿಂದ ದೇವರು ಇಣುಕಿ ನೋಡಿ ` ಕರ್ಮ ಕರ್ಮ, ಹಬ್ಬದ ದಿನ ನಾನ್ ವೆಜ್ಜಾ?’ ಅಂತ ಕೇಳ್ತಿದ್ದ ಹಾಗಿತ್ತು. ಮಾಡಿದ ಕೆಲವೇ ಕ್ಷಣಗಳಲ್ಲಿ ದೇವರಿಗೆ ಬೇಜಾರ್ಯಾಕೆ ಅಂತ ಕಂಪ್ಲೀಟ್ ಖಾಲಿ ಮಾಡಿದ್ದು ನನ್ನ ಸಾಧನೆ. ಆ ದಿನ ತಂಗಿ ಮನೆ ಸುತ್ತಾ ದೀಪ ಜೋಡಿಸಿಡ್ತಾ ಇದ್ದಿದ್ದು ನೋಡಿ ಜೀವನ ಪಾವನ ಆಗೋಯ್ತು ಅನ್ಕೊಂಡೆ. ಇನ್ನು ನಮ್ಮನೇಲಿ ಪರಿಸರ ಉಳಿಸೋ ದೃಷ್ಟಿಯಿಂದ  ಮೂರು ವರ್ಷದಿಂದ ಪಟಾಕಿ ಹೊಡಿಯೋಲ್ಲ ಅನ್ನೋದು ನಮ್ಮ ಹೆಮ್ಮೆ…

ಮಾರನೆ ದಿನ ಎದ್ದು ಸೂರಿ ಮಾಮನ ಮನೆಗೆ ಹೋದೆ, ಅವರ ಮನೇಲಿ ಈಗ್ಲೂ ಸಕತ್ ದನಗಳಿವೆ. ಹಂಗಾಗಿ ಗೋ ಪೂಜೆ ನೋಡೋಣ ಅಂತ. ನೋ ಯೂಸ್ ಸಾಹೇಬರು ಗಂಟೆ ಹತ್ತಾದ್ರು ಶಿವಮೊಗ್ಗಕ್ಕೆ ಹೂ ತರೋಕೆ ಹೋದವರು ಇನ್ನೂ ಬಂದಿರ್ಲಿಲ್ಲ. ಅತ್ತೆ ಕೊಟ್ಟ `ಕೊಟ್ಟೆ ಕಡುಬು’ ನಮಗಾದ ಲಾಭ ಅಷ್ಟೇ. ಅಲ್ಲಿಂದ ಬಂದು ನಾನು ಕೆಲಸ ಕಲಿತಿದ್ದ ಸ್ಟೂಡಿಯೋದಲ್ಲಿ 3 ಗಂಟೆ ತನಕ ಕೂತೆ. ಅಷ್ಟು ಹೊತ್ತಿಗೆ ಅಮ್ಮನ ಕರೆ ಬಂತು. ಮನೆಗೆ ಹೋದ್ರೆ ಪರಮಾಶ್ಚರ್ಯ. ಅಮ್ಮ ವೆರೈಟಿ ವೆರೈಟಿ ಅಡುಗೆ ಮಾಡಿ ಎಡೆ ಇಟ್ಟಿದಾರೆ. ಆಹಾ ಅನ್ನಿಸಿ ಊಟಕ್ಕೆ ಕೂತೆ. ಕೋಸಂಬರಿ, ಕಾಳು ಪಲ್ಯ, ಟೇಸ್ಟಿ ಉಪ್ಪಿನಕಾಯಿ, ಅನ್ನಪೂರ್ಣ ಉಪ್ಪು, ಬೇಳೆ ಹೂರಣದ ಹೋಳಿಗೆ, ಅದಕ್ಕೆ ತುಪ್ಪ, ಶ್ಯಾವಿಗೆ ಪಾಯಸ, ಅದಕ್ಕೆ ಬೂಂದಿ, ಬಿಸಿ ಬಿಸಿ ವಡೆ, ಅನ್ನಕ್ಕೆ ಸಾಂಬಾರ್, ತಿಳಿ ಸಾರು, ಮಜ್ಜಿಗೆ… ಅಬ್ಬಬ್ಬ ಸಕ್ಕತ್ ಊಟ. ಗೆಳೆಯನನ್ನ ಕರ್ಕೊಂಡು ಬಂದಿದ್ದಕ್ಕೆ ಮರ್ಯಾದೆ ಉಳೀತು ಅನ್ಕೊಂಡೆ. ಎಲ್ಲರೂ ಸೇರಿ ಸಕ್ಕತಾಗಿ ಬಾರಿಸಿದ್ವಿ. ಅದಾಗಿ ಮೂರ್ನಾಲ್ಕು ಗಂಟೆಯೊಳಗೆ ನನ್ನ ರಿಸರ್ವೇಶನ್ ಮಾಡಿದ ಬಸ್ಸಿನ ಹಾರನ್ ಸಣ್ಣಗೆ ಕೇಳಿಸಿದ ಹಾಗಾಯ್ತು. ಬಸ್ ಹತ್ತಿ ಕೂತು ಕಣ್ಣು ಮುಚ್ಚಿದ್ವಿ, ಕಣ್ಣು ಬಿಟ್ರೆ ಮತ್ತದೇ ಬೆಂಗಳೂರು. ಅಲ್ಲಿಂದ ಡೈರೆಕ್ಟ್ ಆಫೀಸಿಗೆ ಬಂದವನು ಇನ್ನೂ ರೂಮಿಗೆ ಹೋಗಿಲ್ಲ. ಅಜ್ಜಿ ಮನೆಯ ದೀಪಾವಳಿ ಅಲ್ಲದಿದ್ರೂ ಓಕೆ ಓಕೆ ಅನ್ನೋ ಹಾಗಿದ್ದ ದೀಪಾವಳಿ ನೆನಪ್ಯಾಕೋ ಇನ್ನೂ ಕಾಡ್ತಾ ಇದೆ… ಅಟ್ ದ ಸೇಮ್ ಟೈಮ್ ಕ್ವಿಂಟಾಲ್ ಗಟ್ಲೆ ಕೆಲಸ ಇನ್ನೂ ಬಾಕಿ ಇದೆ… ಅದನ್ನ ಮುಗಿಸದೆ ಇದ್ರೆ ಬಾಸ್ ಮಕ್ಕುಗೀತಾರೆ. ಬಾಯ್ ಬಾಯ್

ಭಲೆ ಭಲೇ ಬಲಮುರಿ…

ಭಲೆ ಭಲೆ ಬಲಮುರಿ...

`ಲೋ ಮಗಾ ಒಂದ್ ಟ್ರಿಪ್ ಅರೇಂಜ್ ಮಾಡಲೇ, ಒಂದ್ ದಿನ ಆರಾಮಾಗ್ ಹೋಗ್ ಬರಣ’ ಅಂತ ಸುಪ್ರೀತ್  ಸಾವಿರ ಸಲ ಹೇಳಿದ್ದ. ನಾನೂ ಅವನಿಗೆ ಆಶ್ವಾಸನೆ ಕೊಡ್ತಾನೆ ಇದ್ದೆ. `ಆಯ್ತು ಮಗಾ, ಹೋಗಣ, ಒಂಚೂರು ಫ್ರೀ ಆಗ್ತೀನಿ. ಆಮೇಲ್ ಹೋಗಣ’ ಅಂತ ಕಾಗೆ ಹಾರಿಸ್ತಾನೆ ಇದ್ದೆ. ಆದ್ರೆ ಮೊನ್ನೆ ಭಾನುವಾರ ಹೋಗಲೇಬೇಕು ಅಂತ ನಂಗೂ ಮನಸಾಯ್ತು. ಸುಪ್ರೀತ್, ದಿವ್ಯ, ಚೇತು, ಯಶು, ರಕ್ಷಾ ಒತ್ತಾಯಕ್ಕೆ ಮಣಿದು ಜೈ ಅಂತ ಹೊರಟೇ ಬಿಟ್ವಿ. ಯಶು, ಚೇತು ಹೆಂಗಿದ್ರೂ ಮೈಸೂರಲ್ಲೇ ಇರ್ತಾರೆ. ನಾವೂ ಅಲ್ಲಿಗೆ ಹೋಗಿ ಅಲ್ಲಿಂದ ಎಲ್ಲಿಗಾದ್ರೂ ಹೋಗಣ ಅನ್ಕೊಂಡು ಸೂರ್ಯ ಹುಟ್ಟೋಕೆ ಮುಂಚೆ ಟ್ರೈನ್ ಹತ್ತಿ ಮೈಸೂರಿಗೆ ಹೊರಟೇ ಬಿಟ್ವಿ… ನಾನು, ಸುಪ್ರೀತ್, ಮಲ್ಲಿ, ದಿವ್ಯ, ರಕ್ಷಾ, ಲಕ್ಷ್ಮಣ್  ಹೀಗೆ ಆರು ಜನರ ಟೀಮು…  ಹತ್ತು ಫೋಟೋ ತೆಗೆದು, 16 ಡೈಲಾಗ್ ಹೊಡೆದು, ಅವರಿವರಿಗೆ ಕಾಲೆಳಿತಾ ಇದ್ದಂಗೆ ಮೈಸೂರಲ್ಲಿ ನಮ್ ಟ್ರೇನು ಕೂ… ಅಂತ ಕೂಗ್ತಾ ಇತ್ತು. `ಯಲಾ ಇವನಾ ಮೈಸೂರ್ ಇಷ್ಟ ಹತ್ರ ಆಗೋಯ್ತಾ ‘ಅನ್ಕೊಂಡು ಅಲ್ಲೇ ನಲ್ಲೀಲಿ ಸಣ್ಣಗೆ  ಬರ್ತಿದ್ದ ನೀರಲ್ಲಿ ಮುಖ ತೊಳೆದು, ಗಬ್ಬೆದ್ದ ಕರ್ಚೀಫಲ್ಲಿ ಮುಖ ಒರುಸ್ಕೊಂಡು, ಕಣ್ಣಿಗೆ ರಜನಿ ಸ್ಟೈಲಲ್ಲಿ ಗ್ಲಾಸ್ ಏರುಸ್ಕೊಂಡು ಮೈಸೂರಿನ ನೆಲದ ಮೇಲೆ ಕಾಲಿಟ್ಟೆ. ಕರ್ಮಕಾಂಡ, ಗಾಳಿ ಜೋರಾಗ್ ಬೀಸಲಿಲ್ಲ. ಮಳೆ ಬರ್ಲಿಲ್ಲ, ಮಿಂಚು ಗುಡುಗಿಲ್ಲ. ಅದು ಬರೀ ದರ್ಶನ್, ರಜನೀಕಾಂತ್, ಚಿರಂಜೀವಿ ಫಿಲ್ಮಲ್ಲಿ ಮಾತ್ರ ಅನ್ಕೊಂಡು 100 ಹೆಜ್ಜೆ ಇಡ್ತಿದ್ದ ಹಾಗೆ ನನ್ನ ಮುದ್ದು ತಂಗ್ಯವ್ವ ಯಶು ಕಾಣಿಸಿದ್ಲು. `ಅಯ್ಯೋ ಬಂಗಾರ ಎಷ್ಟು ದಿನಾ ಆಯ್ತೆ ನಿನ್ನ ನೋಡಿ’ ಅಂತ ಮನಸಲ್ಲೇ ಅನ್ಕೊಂಡು ಅವಳನ್ನ ಮಾತಾಡಿಸ್ಕೊಂಡು ರೈಲ್ವೆ ಸ್ಟೇಷನ್ನಿಂದ ಹೊರಗೆ ಬಂದ್ವಿ. ಸ್ವಲ್ಪ ಹೊತ್ತಿಗೆ ನಾವಿದ್ದ ಜಾಗಕ್ಕೆ `ಮೈಸೂರ್  ಮಿತ್ರ’ ಕೆ.ಪಿ ಬಂದ. ಅವನ ಜೊತೆ ಒಂದಷ್ಟು ಹರಟಿ ಅವನಿಗೆ ಟಾಟಾ ಮಾಡ್ತಿದ್ದ ಹಾಗೆ ಬಹು ನಿರೀಕ್ಷಿತ ಚೇತನಾ ಅಲಿಯಾಸ್ ಪುಂಗಿ ಬಂದ್ಳು. ಅವಳು ಹಚ್ಚಿದ್ದ ಫೇರ್ ಎವರ್ ವಾಸನೆ ಮೂಗಿಗೆ ಇನ್ನೂ ಹೊಡೀತಾನೆ ಇತ್ತು. ಅಷ್ಟರ ಮಟ್ಟಿಗೆ ಅವಳು ಫ್ರೆಶ್ ಆಗಿ ಟ್ರಿಪ್ ಗೆ ರೆಡಿ ಆಗಿ ಬಂದಿದ್ಲು…

ಹೋಗೋದೆಲ್ಲಿಗೆ? ಅದು ಎಲ್ಲರಿಗೂ ಕಾಡ್ತಿದ್ದ ಪ್ರಶ್ನೆ. ಸುಪ್ರೀತ ಅಷ್ಟರೊಳಗೆ ನೂರಾರು ಸಲ ಬಲಮುರಿ -ಎಡಮುರಿ ಅಂತ ಮಂತ್ರ ಜಪಿಸಿದ್ದ. ಎಲ್ಲರಿಗೂ ಆ ಜಾಗ ಓಕೆ ಅನ್ನಿಸ್ತು. ಅಲ್ಲೇ ಒಂದು ಕಾರ್ ಬಾಡಿಗೆ ಮಾಡ್ಕೊಂಡು ಹೊರಟವರಿಗೆ ಮುಂದಿನ 25 ನಿಮಿಷದಲ್ಲಿ ಬಲಮುರಿ ಫಾಲ್ಸ್ ನ ಝರಿಯ ಶಬ್ದ ಕೇಳಿಸ್ತು. ಕಾರ್ ನಿಂತ 5-10 ನಿಮಿಷದಲ್ಲಿ ಎಲ್ಲರ ಪಾದಗಳಿಗೆ ಕಾವೇರಿಯ ತಂಪು ತಾಗಿತ್ತು. ಅಷ್ಟು ಅರ್ಜೆಂಟ್  ಎಲ್ಲರಿಗೂ ನೀರಿನಲ್ಲಿ ಆಡಿ ಕುಣಿಯೋಕೆ… ಸೂಪರ್ ಅನ್ಕೊಂಡು ಮುಂದೆ ಮುಂದೆ ಹೋಗ್ತಿದ್ರೆ ನೀರಿನ ಸೆಳೆತ ಜಾಸ್ತಿ ಆಗ್ತಾ ಇತ್ತು. ಆದರೂ ನಮ್ ಹುಡುಗರ್ ಕೇಳ್ಬೇಕಾ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಅಂತ ಹೋಗ್ತಾನೆ ಇದ್ರು. ಫೈನಲಿ ಎಲ್ಲರೂ ಒಂದು ಜಾಗದಲ್ಲಿ ಹೋಗಿ ಸೆಟ್ಲ್ ಆದ್ವಿ… ನಾನು, ಸುಪ್ರೀತ್,ಮಲ್ಲಿ, ದಿವ್ಯ ಈಜು ಬರೋರು. ಇನ್ನುಳಿದವರು ಮೂಕ ಪ್ರೇಕ್ಷಕರು. ಕ್ಯಾಮರಾ ಹಿಡ್ಕೊಂಡು ಬಂದ್ರೆ ನೀರಿಗೆ ಇಳಿಯೋದು ತಪ್ಪುತ್ತೆ ಅನ್ಕೊಂಡು ಬಂದ ಯಶು ಸಹ ನಾವ್ ಆಡೋ ಆಟ ನೋಡಿ ಲಕ್ಷ್ಮಣ್ ಕೈಗೆ ಕ್ಯಾಮರಾ ಕೊಟ್ಟು ನಮ್ಮ ಜೊತೆ ಜಾಯ್ನ್ ಆದ್ಲು… ಇಷ್ಟೆಲ್ಲಾ ಆಟ ಆಡ್ಕೊಂಡು ಆರಾಮಾಗಿ ಇದ್ದ ಹೊತ್ತಿಗೆ ನನ್ನ ಮಂಗಾಟದ ತಲೆಗೇನೋ ಹೊಳೀತು ಅನ್ನೋ ತರ ನೀರಿನಿಂದ ಎದ್ದು ರಭಸದಲ್ಲಿ ಹರೀತಿದ್ದ ನೀರಿನ ಕಡೆಗೆ ಹೊರಟೆ. ನೀರಿನ ಸೆಳೆತ ಸಖತ್ತಾಗೆ ಇತ್ತು. ಹೆಂಗೇ ಅಳೆದೂ-ತೂಗಿದರೂ ನನ್ನ ತೂಕ ೫೪ ದಾಟಲ್ಲ. ಇಂತಾ ದೇಹ ಇಟ್ಕೊಂಡು ನೀರಿನ ವಿರುದ್ದ ಯುದ್ದ ಮಾಡೋನ ಹಾಗೆ ಒಂದು ಕಲ್ಲನ್ನ ಹಿಡ್ಕೊಂಡು` ಹೆಂಗೆ’ ಅಂತ ಪೋಸ್ ಕೊಡ್ತಾ ಇದ್ದೆ. ಅಷ್ಟರಲ್ಲಿ ನನ್ನ ಕೈ ಕಲ್ಲಿಂದ ಜಾರಿತ್ತು… ಎಲ್ಲಾ ನೋಡ್ತಾ ಇದ್ದ ಹಾಗೆ ನಾನು ಉರುಳ್ಕೊಂಡು ಹೋಗಿ 5-6 ಅಡಿ ಕೆಳಗಿದ್ದ ಕಲ್ಲುಗಳ ಮೇಲೆ ಪಲ್ಟಿ ಹೊಡೆದಿದ್ದೆ. ಮೇಲೆ ನೋಡ್ತಾ ಇದ್ದೋರೆಲ್ಲ `ಅನ್ಯಾಯವಾಗಿ ಹೋಗೆ ಹಾಕುಸ್ಕೊಂಡ’ ಅನ್ನೋ ತರ ನೋಡ್ತಾ ಇದ್ರು. ನಮ್ ಟೀಮ್ ಹುಡುಗರೆಲ್ಲ ಲಬೋ ಲಬೋ ಅಂತ ಬಡ್ಕೊತಾ ಇದ್ರು. ನಾನು ಎಷ್ಟ್ ಹೊಡೆತ ಬಿದ್ರು ಏನೂ ಆಗದ ತೆಲುಗು ಹೀರೋ ತರ ಅಲ್ಲಿಂದ ಮೇಲೆದ್ದೆ. ಅಷ್ಟರಲ್ಲಿ ಮೀಟರ್ ಆಫ್ ಆಗಿದ್ರೂ ನಂಗೇನೂ ಆಗಿಲ್ಲ ಅನ್ನೋ ತರ ಪೋಸ್ ಕೊಟ್ಟೆ. ಕಷ್ಟ ಪಟ್ಕೊಂಡು ನೀರಿನ ಫೋರ್ಸಿನ ವಿರುದ್ದ ಹೋರಾಡಿ ದಡ ಸೇರ್ಕೊಂಡೆ. ಆಮೇಲೂ ಸ್ವಲ್ಪ ಧೈರ್ಯ ಮಾಡಿ ಆಟ ಆಡಿದ್ದಾಯ್ತು. ಒಂದಷ್ಟು ಹೊತ್ತು ಮಂಗಾಟ ಆಡಿ ಕಷ್ಟ ಪಟ್ಕೊಂಡು ಕಾರಿನ ಹತ್ರ  ಹೋಗಿ ಸೆಟ್ಲ್ ಆದ್ವಿ… ಆದ್ರೆ ನಮ್ಮ ಸುಪ್ರೀತನಿಗೆ ಇನ್ನೂ ನೀರಿನ ಚಟ ತೀರಿರಲಿಲ್ಲ. ಊಟ ಮುಗಿಸಿ ಪುಂಗಿ, ಯಶು, ಲಕ್ಷ್ಮಣ್ ಕರ್ಕೊಂಡು ಹೋದವನು ಒಂದು ಗಂಟೆ ಬಿಟ್ಟು ಬಂದ…ಅಷ್ಟರಲ್ಲಿ ನಾನು, ಮಲ್ಲಿ, ದಿವ್ಯ, ರಕ್ಷಾ ಕಾರಲ್ಲಿ ಕೂತು 2 ಪ್ಲೇಟ್ ಕಬಾಬ್ ಖಾಲಿ ಮಾಡಿದ್ವಿ.   ಒಂದಂತೂ ಸತ್ಯ, ಬಹಳ ದಿನಗಳ ನಂತರ ಎಲ್ಲರೂ ಜೊತೆಯಾಗಿ ಒಂದು ಟ್ರಿಪ್ ಗೆ ಹೋಗ್ಬೇಕು ಅನ್ಕೊಂಡು ಬಂದಿದ್ದಕ್ಕೂ ಸಖತ್ ಸಮಾಧಾನ ಆಗಿತ್ತು. ಎಲ್ಲರೂ ಫುಲ್ ಖುಷ್. ಅಷ್ಟರ ಮಟ್ಟಿಗೆ ಟ್ರಿಪ್ ಸಕ್ಸಸ್.

ನಾನು-ಯಶು... ನನ್ನ ಕಂದಮ್ಮ (ತಂಗ್ಯವ್ವ)

ಅಲ್ಲಿಂದ ನೇರವಾಗಿ ಮೈಸೂರಿಗೆ ವಾಪಸ್ ಬಂದು ದಸರಾ ಎಕ್ಸಿಬಿಶನ್ ನಲ್ಲಿ ಮೂಕನ ಹಾಗೆ ಮಂಗಾಟ ಆಡಿ, ಕಿರಿಚಾಡಿ ಕೂಗಾಡಿ ಹೊರಗೆ ಬರೋದ್ರೊಳಗೆ ಗಂಟೆ ಎಂಟಾಗಿತ್ತು. ಬೆಂಗಳೂರು ನಮ್ಮನ್ನ ಕರೀತಾ ಇತ್ತು. ಹಾಗಾಗಿ ಎಲ್ಲರೂ ಆಟೋ ಹತ್ತಿ ಬಸ್ ಸ್ಟ್ಯಾಂಡ್ ತಲುಪಿದ್ವಿ.  ಅಲ್ಲೀ ತನಕ ಇದ್ದ ಸಂತೋಷ ಸಡಗರ ಆ ಸ್ಥಳದಲ್ಲಿ ಮರೆಯಾಗಿತ್ತು. ಎಲ್ಲರ ಮುಖದಲ್ಲೂ  ಒಂತರಾ ಬೇಜಾರು. ಬಸ್ ಹತ್ತೊದ್ರೊಳಗೆ ದಿವ್ಯ, ಚೇತನಾ ಸೇರಿ ಮುಂದಿನ ಟ್ರಿಪ್ ಪ್ಲಾನ್ ಮಾಡ್ತಾ ಇದ್ರು. ನಾನು ಮನಸಲ್ಲೇ ನಗ್ತಾ ಇದ್ದೆ.  ನಾನ್ ಫ್ರೀ ಆಗ್ತಿನೋ ಇಲ್ವೋ ಅಂತ. ಆಗ್ಲೇ ಬೇಕು ಅಂತ ನಿರ್ಧಾರ ಮಾಡಿ ನನ್ನ ಮುದ್ದು ತಂಗಿಯ ಹಣೆಗೊಂದು ಮುತ್ತಿಟ್ಟು ಬಸ್ ಹತ್ತಿ ಸೀಟಿಗೊರಗಿ ಮಲಗಿದ 3 ಗಂಟೆಯಲ್ಲಿ ನನಗೆ ಕಂಡಿದ್ದು ಮತ್ತದೇ ಕಂಪ್ಯೂಟರ್ರು, ಮತ್ತದೇ ನ್ಯೂಸ್ ಡೆಸ್ಕು, ಆ ದಿನದ ಸವಿ ನೆನಪುಗಳನ್ನ ನೆನಪು ಮಾಡ್ಕೊಂಡು ಇವತ್ಯಾವ ಕೆಲಸಾನೂ ಮಾಡಲ್ಲ ಅಂತ ನನ್ನ ಕುರ್ಚಿಗೆ ತಲೆ ಕೊಟ್ಟೆ. ಮತ್ತೆ ಕಣ್ಣು ಬಿಟ್ಟಾಗ ಬೆಳಿಗ್ಗೆ 5 ಗಂಟೆ ಆಗಿತ್ತು. ಅಯ್ಯೋ ಲೇಟಾಯ್ತು ಅಂತ ಸಿಂಗ್ರಿ ರೌಂಡ್ಸ್ ಸ್ಕ್ರಿಪ್ಟ್ ಹೊಡೀತಾ ಕೂತೆ.  ಆದರೂ ಮಧ್ಯ ಮಧ್ಯ ಬಲಮುರಿ ನನ್ನನ್ನ ತುಂಬಾ ಕಾಡ್ತಾ ಇತ್ತು…

Im missing them… Very Badly…

ಹೇ ಮತ್ಯಾವಾಗಾದ್ರೂ ಅಂತದ್ದೇ ಮತ್ತೊಂದು ಟ್ರಿಪ್ ನೆಪದಲ್ಲಿ ಎಲ್ಲ ಮೀಟ್ ಮಾಡೋಣ್ವಾ…? ಪ್ಲೀಸ್…

`ಏನು…? ನಾಳೆ ಹಬ್ಬಾನ? ಯಾವ್ ಹಬ್ಬ…!?’ ದೇವರಾಣೆ ಈ ಪ್ರಶ್ನೆನ ನಾನು ನಿನ್ನೆ ರಾತ್ರಿ ನನ್ನ ಗೆಳತಿ ಚೇತನಾಗೆ ಕೇಳಿದ್ದೆ. ಆಶ್ಚರ್ಯ ಏನಿಲ್ಲ… ಈ ಬೆಂಗಳೂರಲ್ಲಿ ನಾಲ್ಕು ಗೋಡೆಯ ನಡುವಿನ ಬದುಕು ವಾರ, ದಿನಾಂಕವನ್ನೆ ಮರೆಸಿಬಿಡುತ್ತವೆ. ಅಂತದ್ರಲ್ಲಿ ಹಬ್ಬದ ನೆನಪಾದ್ರೂ ಹೇಗೆ ಆಗೋಕೆ ಸಾಧ್ಯ. ನೋ ಚಾನ್ಸ್.. ಅಟ್ ಲೀಸ್ಟ್  ಅಮ್ಮ, ತಂಗೀನಾದ್ರೂ ಫೋನ್ ಮಾಡಿ ಹಬ್ಬಕ್ಕೆ ಬರಲ್ವ ಅಂತ ಕೇಳಿರ್ತಿದ್ರು. ಆದ್ರೆ ಊರಿಗೆ ಕರೆದಾಗಲೆಲ್ಲಾ  ನನ್ನ ಹತ್ರ ಬೈಸಿಕೊಂಡು ಅವರೂ ಸುಮ್ನಾಗಿ ಹೋಗಿದಾರೆ. ಹಂಗಾಗಿ ಅವರೂ ಕರೆಯಲ್ಲ, ನಾನೂ ಹೋಗಲ್ಲ… ನಂದೂ ಒಂದು ಬದುಕು…

ಅಂದಹಾಗೆ ಇವತ್ತಿನ ಹಬ್ಬ ಆಯುಧ ಪೂಜೆ ಅಲ್ವ? ಅದೇ 8 -10 ವರ್ಷಗಳ ಹಿಂದೆ ನಮ್ಮೂರ ರೈಸ್ ಮಿಲ್ ಎದುರು ಕುಂಬಳಕಾಯಿ ಒಡೆದಾಗ ಅದೊರಳಗೆ ಅವಿತು ಕೂತ ಕುಂಕುಮ ತುಂಬಿದ ಕಾಯಿನ್ ಗಳಿಗಾಗಿ ಕೈ ನುಗ್ಗಿಸಿ ಕಿತಾಡ್ತಾ ಇದ್ವಲ್ಲ ಅದೇ ಹಬ್ಬ ತಾನೇ… ಅದೇ ಅದೇ.. ಯಾಕಂದ್ರೆ ನಮ್ ಆಫೀಸ್ ನಲ್ಲೂ ಇವತ್ತು ಕ್ಯಾಮರಾ, ಲೈಟು, ಕಂಪ್ಯೂಟರ್ ಗೆಲ್ಲಾ ಪೂಜೆ ಮಾಡಿ ಅಂತದ್ದೇ ಕುಂಬಳಕಾಯಿಯನ್ನ ಹೊರಗೆ ಓಡೀತಾ ಇದ್ರು… ಅದೇನೇ ಇರ್ಲಿ ನಾನ್ ಹೇಳೋಕೆ ಹೊರಟಿರೋದು ಬ್ಯಾಚುಲರ್ ಗಳ ಹಬ್ಬಗಳು ಈ ಬೆಂಗಳೂರಲ್ಲಿ ಹೇಗಿರುತ್ತೆ ಅಂತ… ನಾನು ಬೆಂಗಳೂರಿನಲ್ಲಿ 4 ವರ್ಷದಿಂದ ಬ್ಯಾಚುಲರ್.. ಹಂಗಾಗಿ ಅನುಭವದ ಮೇಲೆ ಇವೆಲ್ಲಾ ಹೇಳ್ತೀನಿ ಕೇಳಿ… ನಾನು ಮನೆಗೆ ಹೋಗಿ ಇವತ್ತಿಗೆ ಏಳು ದಿನ ಆಗಿತ್ತು. ಆಫೀಸ್-ಶೂಟಿಂಗ್ ಮನೆ ಇಷ್ಟೇ ನನ್ನ ಬದುಕು… ಆದ್ರೆ ಇವತ್ತು ಹಬ್ಬ ಅನ್ನೋ ಕಾರಣಕ್ಕೆ ನನ್ನನ್ನ ಅಪರೂಪಕ್ಕೆ ನೋಡೋ ನನ್ನ ರೂಮಿಗೆ ಹೋಗಿ ನನ್ನ ಬಾತ್ ರೂಂಗೆ ನನ್ನ ಕೊಳಕು ಮೈ ತೋರಿಸಿ, ಡವ್ ಸೋಪೇ ಕಪ್ಪಾಗೋ ಹಾಗೇ ಮೈ ತಿಕ್ಕಿ ಸ್ನಾನ ಮಾಡಿ ಬಂದೆ… ಅದೊಂದೇ ಇವತ್ತಿನ ಮಟ್ಟಿಗೆ ನಾನು ಹಬ್ಬಕ್ಕೆ ಕೊಟ್ಟ ಉಡುಗೊರೆ. ಆಫಿಸಿಗೆ ಬಂದ್ರೆ ಎಲ್ಲರ ಬೈಕುಗಳೂ ಲಕ ಲಕ ಮಿಂಚ್ತಾ ಇದೆ. ನನ್ನ ಬೈಕು ಮಾತ್ರ ನಿನ್ನೆ ಮೊನ್ನೆ ಗಂಡನನ್ನ ಕಳೆದುಕೊಂಡವಳ ಹಾಗೆ ಮಂಕಾಗಿದೆ… `ನೀನ್ ಮಾತ್ರ ಸ್ನಾನ ಮಾಡಿ ಬಂದೆ ಕನಿಷ್ಠ ನನ್ನ ಹೊದ್ದುಕೊಂಡಿರೋ ಧೂಳಾದ್ರು ಒರೆಸು’ ಅಂತ ಬೇಡ್ಕೊಳ್ತಾ ಇರೋ ಹಾಗಿತ್ತು ನನ್ನ ಬೈಕ್…’ ಆದ್ರೆ ನಾನು ಆ ವಿಚಾರದಲ್ಲಿ ನಿಷ್ಕರುಣಿ. `ಮಳೆ ಬಂದ್ರೆ ಮಾತ್ರ ನಿಂಗೆ ಸ್ನಾನ’ ಅಂತ ಹೇಳಿ ಅದರ ಬೆನ್ನು ಎಳೆದು ಸ್ಟ್ಯಾಂಡ್ ಹಾಕಿ ಆಫೀಸ್ ಒಳಗೆ ಬಂದ್ರೆ ಎಲ್ಲೆಲ್ಲೂ ಕಲರ್ ಕಲರ್ ಕಲರ್.. ಹುಡುಗೀರು ಸೀರೆಯುಟ್ಟು ಮಿಂಚ್ತಾ ಇದಾರೆ, ಹುಡುಗರೆಲ್ಲಾ ಹೊಸ ಬಟ್ಟೆಯಲ್ಲಿ ಶೈನಿಂಗ್.. ಅದೃಷ್ಟಕ್ಕೆ ನಾನಿವತ್ತು ಮನುಷ್ಯನ ಹಾಗೆ ನೀಟಾಗಿ ಫಾರ್ಮಲ್ ಹಾಕ್ಕೊಂಡು ಬಂದಿದ್ದೆ. ಮರ್ಯಾದೆ ಉಳೀತು.ಅವರನ್ನೆಲ್ಲ ನೋಡಿದ ಮೇಲೆ ನಂಗೂ ಗ್ಯಾರಂಟಿ ಆಯ್ತು,  ಇವತ್ತು ನಿಜವಾಗಲೂ ಹಬ್ಬ ಅಂತ… !

ಆದರೂ ನಮ್ಮದೇನು ಬದುಕು ಅಂತೀನಿ…? ಹಬ್ಬ ಇಲ್ಲ, ಹರಿದಿನ ಇಲ್ಲ… ಎಲ್ಲಾ ದಿನಾನೂ ಒಂದೇ.. ಆ ಕಾಲ ಎಷ್ಟ್ ಸಕ್ಕತ್ತಾಗಿತ್ತು.. ಇವತ್ ಹೆಂಗಿದೆ…? ಇವತ್ತು ಯಾರೋ ತಂದು ಕಳ್ಳೆಪುರಿ ಕೊಟ್ರು. ಅವತ್ತು ಕವರ್ ಹಿಡ್ಕೊಂಡು ಅಂಗಡಿ ಅಂಗಡಿಲಿ ಕಳ್ಳೆಪುರಿ ಕಲೆಕ್ಷನ್ ಮಾಡ್ತಾ ಇದ್ದಿದ್ದು ನೆನಪಾಯ್ತು.. ದುಡಿಮೆಯ ಹೆಸರಲ್ಲಿ ಹಬ್ಬ, ಸಂಸ್ಕೃತಿ, ಆಚರಣೆ ಮರೆತ ಈ ಬದುಕಿಗಿಂತ ಆ ಬದುಕೇ ಸಕ್ಕತ್ತಾಗಿತ್ತು ಅನ್ಸುತ್ತೆ… ಅಮ್ಮ ಮಾಡ್ತಿದ್ದ ಹೋಳಿಗೆ, ಕದ್ದು ತಿಂತಿದ್ದ ಹೂರಣ, ಅಪ್ಪ ತರ್ತಿದ್ದ ಜಿಲೇಬಿ, ಒಟ್ಟಿಗೆ ಕೂತು ಮಾಡ್ತಿದ್ದ ಊಟ.. ವಾ ವಾ.. ಮತ್ಯಾವತ್ತೂ ಆ ಲೈಫ್ ಸಿಗೋಕೆ ಚಾನ್ಸೇ ಇಲ್ಲ… ಇವತ್ತು ನಮ್ಮ ಪರಿಸ್ಥಿತಿ ನೋಡಿ, ಎಂತಹ ಸ್ಪೆಷಲ್ ಡೇ ಆದರೂ ನಮಗೆ ಆಫೀಸ್ ಪಕ್ಕದ ಹೋಟೆಲ್ಲೇ ಗತಿ. ಅಲ್ಲಿ ಸಿಗೋ ಮಿನಿ ಇಡ್ಲಿ, ವಾಂಗಿಬಾತೆ ಶ್ರೇಷ್ಠ… ಎಲ್ಲಾ ಬ್ಯಾಚುಲರ್ಸ್ ಬದುಕೂ ಹೀಗೇನ ಅಂತ ಡೌಟ್ ಇತ್ತು ನಂಗೆ. ಪಕ್ಕದ ಹೋಟೆಲ್ ಹುಡುಗನ್ನ ಕೇಳಿದೆ, `ಊರಿಗೆ ಹೊಗಿಲ್ವೇನ್ರಿ’  ಅಂತ.. `ಅಯ್ಯೋ ಯಜಮಾನ್ರು ರಜಾ ಕೊಡಲಿಲ್ಲ ‘ ಅಂದ ಅವನು… ನಿಂದೂ ನನ್ನ ತರದ್ದೇ ಬದುಕು ಬಿಡು ಅನ್ಕೊಂಡೆ… ನಮ್ಮ ಆಫೀಸಿನ ಗುಂಡುರಾವ್ ` ನಮಗ್ಯಾವ ಹಬ್ಬ ಬಿಡು ಗುರು, ಇನ್ನೂ ಎಪಿಸೋಡ್ ಹೋಗಿಲ್ಲ’ ಅಂತ ಯಾರಿಗೋ ಹೇಳ್ತಾ ಇದ್ದಿದ್ದು ಕಿವಿಗೆ ಬಿತ್ತು… ಮದುವೆಯಾಗಿರೋ ಅನಿಲ್  ಹಬ್ಬದ ಹೆಸರಲ್ಲಿ ರಜಾ ಹಾಕಿ ಇಷ್ಟು ಹೊತ್ತಿಗೆ ಊರಲ್ಲಿ ಸೆಟಲ್ ಆಗಿರ್ತಾನೆ. ಇನ್ನುಳಿದಂತೆ ಬ್ಯಾಚುಲರ್ ಗಳು ಮಾತ್ರ ಎಂದಿನಂತೆ ಕೆಲಸದಲ್ಲಿ ಫುಲ್ ಬ್ಯುಸಿ…. ಏನಾದ್ರೂ ಆಗ್ಲಿ ಅಂತ ಸಂಜೆ ಪಕ್ಕದ ಹೋಟೆಲ್ ಗೆ ಹೋದೆ, ಅಲ್ಲಿ ಸಿಗೋ ಕಾಯಿ ಹೊಲಿಗೆನಾದ್ರೂ ತಿಂದು ಬರೋಣ ಅಂತ… ಗ್ರಹಚಾರಕ್ಕೆ ಅದೂ ಬಾಗಿಲು ಹಾಕಿತ್ತು. ವಾಪಸ್ ಬರಬೇಕಾದ್ರೆ ನನ್ನ ಬೈಕ್ ಕಡೆ ಕಣ್ಣು ಹಾಯಿಸ್ದೆ… ಎಲ್ಲಾ ಸಿಂಗಾರಗೊಂಡ ಬೈಕುಗಳ ನಡುವೆ ಅದು ಅನಾಥ ಪ್ರಜ್ಞೆ ಹೊತ್ತು ಅಲ್ಲೇ ನಿಂತಿತ್ತು.. `ದೀಪಾವಳಿಗೆ ನಾನೇ ಸ್ನಾನ ಮಾಡಿಸ್ತೀನಿ, ಡೋಂಟ್ ವರಿ…’  ಅಂತ ಹೇಳಿ ಲಿಫ್ಟ್ ಹತ್ತಿ ನನ್ನ ಸಿಸ್ಟಂ ಎದುರು ಕೂತು ಈ ಶೋಕ ಕಥನ ಬರೀತಾ ಇದೀನಿ.. ನೀವು ಓದು ಮುಗಿಸಿ ಮುಗುಳ್ನಗ್ತಾ  ಇದೀರಿ… ಇಷ್ಟೇ ಬ್ಯಾಚುಲರ್ ಬದುಕು…
ವಿಶೇಷ ಸೂಚನೆ : 7 -8 ದಿನ ಮನೆಗೆ ಹೋಗದೆ ಇದ್ರೂ, ಶೂಟಿಂಗ್ ಮನೆಯಲ್ಲಿ ನಾನು ಸ್ನಾನ ಮಾಡ್ಕೊಂಡಿದ್ದೆ.. ಆದ್ರೆ ಸರಿಯಾಗಿ ಮಾಡೋಕ್ ಆಗಿರಲಿಲ್ಲ ಅಷ್ಟೇ… !!!!

ನಾನ್ ಹಾಗೇನೆ, ನಂಗೆ, ನನ್ನ ಮನಸ್ಸಿಗೆ ಯಾರಾದ್ರು ಇಷ್ಟ ಆದ್ರೆ ಪಟ್ ಅಂತ ಹೇಳಿ ಪಟ್ ಅಂತ ಅವರನ್ನ ಹತ್ತಿರ ಮಾಡ್ಕೊಂಡು ಬಿಡ್ತೀನಿ. ಅವರು ಯಾವ್ದಾದ್ರು ಒಂದು ರೀತಿಯಲ್ಲಿ ನನ್ನ ಜೊತೆಗೆ ಇರಬೇಕಷ್ಟೇ… `ಈಗ್ಯಾಕೋ ಈ ತರ ಕುಯ್ತಾ ಇದಿಯ ದೊಡ್ಡ ಫ್ಲರ್ಟ್ ನಾನ್ ಮಗ ನೀನು’ ಅನ್ನೋರಿಗೆ ನಾನೇನು ಹೇಳಕ್ಕಾಗಲ್ಲ. ಎಲ್ಲಾ ಟೈಮ್ ಅಲ್ಲೂ ನನ್ನ ಮನಸು ಫ್ಲರ್ಟ್ ಮಾಡ್ತಿರಲ್ಲ.. ಅದರಲ್ಲೂ ಒಂದಷ್ಟು ಭಾವನೆಗಳಿವೆ, ಅದಕ್ಕೂ ಒಂದಷ್ಟು ಅರ್ಥ ಮಾಡ್ಕೊಳೋ ಮನಸು ಬೇಕು ಅನ್ಸುತ್ತೆ. ಸಾಮಾನ್ಯವಾಗಿ ನಾನು ಯಾರನ್ನಾದ್ರೂ ನನ್ನ ತಂಗಿಯಾಗ್ತಿಯ?  ಅಂತ ಕೇಳೋದು ತುಂಬಾ ಕಮ್ಮಿ. ಆದ್ರೆ ಕೆಲವರನ್ನ ನೋಡಿದಾಗ, ಕೆಲವರ ಜೊತೆ ಮಾತಾಡಿದಾಗ, ಕೆಲವರ ಮನಸ್ಸು ಅರಿತುಕೊಂಡಾಗ, ಇವಳೂ ನನ್ನ ತಂಗಿ ತರಾನೆ. ಇವಳೂ ನಂಗೆ ತಂಗಿಯ ಹಾಗೇ ಜೊತೆಗಿರಬೇಕು ಅನ್ಸುತ್ತೆ. ಹಾಗೇ ನಿನ್ನೆ ಇಂದ ನಾನು ಒಂದು ಜೀವವನ್ನ ತಂಗಿಯಾಗಿ ಸ್ವೀಕರಿದಿದ್ದೇನೆ. ಆ ಜೀವದ ಹೆಸರು successವಿನಿ…ನೋಡೋಕೆ ಹುಂಬ ಅನ್ಸುತ್ತೆ, ಆದ್ರೆ ಸಕ್ಕತ್ ಮುಗ್ಧ. ಜಿರಾಫೆಯ ಎತ್ತರ, ಮನಸಿಗೆ ತುಂಬಾ ಹತ್ತಿರ. ಮೊಬೈಲ್ ಅವಳ ಚಡ್ಡಿ ದೋಸ್ತ್, ಅದನ್ನ ಯೂಸ್ ಮಾಡಬೇಡ ಅಂತ ಹೇಳೋದು ಡೆಡ್ ವೇಸ್ಟ್.
ಇವಳ ವಿಚಾರದಲ್ಲಿ ನಂಗೆ ಸಕ್ಕತ್ ಖುಷಿ ಇದೆ, ಅವಳಪ್ಪನ ಆಸೆಯಂತೆ ನಾನು ಐಎಎಸ್ ಆಫಿಸರ್ ಆಗ್ಬೇಕು ಅನ್ನೋ ಆಸೆ ಅವಳಿಗೆ. ಹೆಂಗಾದ್ರೂ ಅವಳಪ್ಪನ ಆಸೆ ಈಡೇರಲಿ ಅನ್ನೋ ಬಯಕೆ ನಂಗೆ.. ಆದ್ರೆ ಜೀವನದಲ್ಲಿ ಸೀರಿಯಸ್ ನೆಸ್ ಅನ್ನೋದು ದೇವರು ಇವಳಿಗೆ ಕೊಡ್ಲೇ ಇಲ್ವೇ.. ಏನೇ ಹೇಳು, ಡೋಂಟ್ ಕೇರ್… ಏನಾಗಲಿ ಮುಂದೆ ಸಾಗು ನೀ ಅನ್ನೋ ವೆರಿ ವಿಚಿತ್ರ ಪಾರ್ಟಿ ಅದು. ಹಂಗಂತಾ ಜೀವನದ ಬಗ್ಗೆ ಕನಸುಗಳೇ ಇಲ್ಲ, ಕನಸುಗಳನ್ನ ನನಸಾಗಿಸೋ ಛಲ ಇಲ್ಲ ಅಂತಲ್ಲ. ಹಟಕ್ಕೆ ಬಿದ್ರೆ ಏನಾದ್ರೂ ಮಾಡಿಬಿಡೋ ಗೂಬೆ ಅದು. ಆದ್ರೆ  ಹಠಕ್ಕೆ ಬೀಳೋದೇ ಇಲ್ಲ ಅಂತಾಳಲ್ಲ ಏನ್ ಮಾಡ್ತೀರಿ???
ಇಷ್ಟ್ ದಿನ ಅವಳು ಹೆಂಗಿದ್ಲೋ ನಂಗೆ ಗೊತ್ತಿಲ್ಲ. ಆದ್ರೆ ಇನ್ನು ಯಾರ್ ಬಿಡ್ತಾರೆ ಅವಳನ್ನ. ನನ್ನ ತಂಗಿಯಾಗೋ ಗ್ರಹಚಾರ ಯಾವ ಹೆಣ್ ಮಕ್ಕಳಿಗೂ ಬೇಡಪ್ಪ. ಅದೃಷ್ಟವಶಾತ್ ಅವಳಿಗೆ ಆ ದುರಾದೃಷ್ಟ ವಕ್ಕರಿಸಿಕೊಂಡಿದೆ. ನನ್ನ ಸಹಿಸ್ಕೊಳೋ ಶಕ್ತಿ ಆ ದೇವರು ಅವಳಿಗೆ ಕೊಡ್ಲಿ ಅನ್ನೋದು ನನ್ನ ಕೋರಿಕೆ…
ಅಂದ ಹಾಗೇ ಅಪ್ಪು, ಇನ್ ಮೇಲೆ ನಾನ್ ನಿನ್ನ ಅಣ್ಣನಾಗಿ ಜೋತೆಗಿರ್ತೀನಿ. ನನ್ನ ಬಗ್ಗೆ ನಿಂಗೆ ಯಾವುದೇ ಕ್ಷಣದಲ್ಲಿ ಸಿಟ್ ಬಂದ್ರೆ ಕೊಳಪಟ್ಟಿ ಹಿಡ್ಕೊಂಡು` ಯಾಕೋ ಅಣ್ಣ ಹಿಂಗಾಡ್ತಿಯ’ ಅಂತ ಕೇಳಿಬಿಡು… ಆದ್ರೆ ಏನೂ ಹೇಳದೆ ಮಾತು ಬಿಡಬೇಡ. ಮನಸಿಗೆ ಬೇಜಾರಾಗುತ್ತೆ. ನನ್ನ ತಂಗಿಯಷ್ಟೇ ನಿನ್ನನ್ನೂ ಪ್ರೀತಿಸ್ತೀನಿ , ಅವಳಷ್ಟೇ ಕೇರ್ ಮಾಡ್ತೀನಿ… ಇವತ್ತು ನೀನು ನನ್ನ ಜೊತೆಗಿದಿಯ, ಆದ್ರೆ 2 -3 ದಿನದಲ್ಲಿ ನನ್ನ ಬಿಟ್ಟು ಹೊರಟು ಬಿಡ್ತೀಯ. ಯಾಕೋ ಬೇಜಾರಾಗ್ತಿದೆ.. ಆದ್ರೂ ಇದು ಅನಿವಾರ್ಯ… ಇಲ್ಲಿಂದ ಹೋದ ಮೇಲೂ ನಿನ್ನಣ್ಣನ ನೆನಪಿರಲಿ. ಹೆಸರಿಗೆ ಮಾತ್ರ ಅಣ್ಣ ಅಲ್ಲ ನಾನು. ಅಣ್ಣಾ ಅಂದ್ರೆ ಅಣ್ಣ ಅಷ್ಟೇ… ಸ್ವಂತ, ಬಾಡಿಗೆ, ಲೀಸು ಅಂತೆಲ್ಲ ಇಲ್ಲ. ಅದೆಲ್ಲ ನಂಗೆ ಗೊತ್ತೂ ಇಲ್ಲ. ಅರ್ಥ ಆಯ್ತಾ ಗೂಬೆ…
ಎನಿವೇ, ನೀನ್ ಇನ್ ಮೇಲೆ ನಾನ್ ಹತ್ರ ನಿಂಗನ್ಸಿದ್ದನ್ನ ಮಾತಾಡ್ಬೋದು, ಯಾವ ಸಮಯದಲ್ಲಾದರೂ ನಾನ್ ನಿಂಗೆ ಲಭ್ಯ, ಕೆಲಸದ ಟೈಮ್ ಹೊರತುಪಡಿಸಿ… ಮೊಬೈಲ್ ಕೀ ಪ್ಯಾಡ್ ಸವೆಸೋದು ಕಮ್ಮಿ ಮಾಡು. ಇಲ್ಲ ಅಂದ್ರೆ ಅದಕ್ಕೊಂದು ಪ್ರಿಂಟರ್ ಹಾಕ್ಸಿ ಮೊಬೈಲ್ ಡಿಟಿಪಿ ಆಪರೇಟರ್ ಮಾಡ್ತೀನಿ ಹುಷಾರು. ಜೀವನದಲ್ಲಿ ಸ್ವಲ್ಪ ಸೀರಿಯಸ್ ಆಗು, ಮಾತು ಮಾತಿಗೆ ಸಿಟ್ ಮಾಡ್ಕೊಳೋದು ಬಿಡು… ನೀನು ಅಮ್ಮಂಗೆ, ನಂಗೆ ಮಾತ್ರ ಪುಟ್ಟ ಹುಡುಗಿ… ಇನ್ನುಳಿದವರ ಕಣ್ಣಿಗೆ ನೀನು ತುಂಬಾ ಬೆಳೆದಿದಿಯ.. ಚೆನ್ನಾಗ್ ಓದು. ಒಳ್ಳೆ ಮಾರ್ಕ್ಸ್ ತೆಗಿ… ನೀನ್ ಜೀವನ ಪೂರ್ತಿ ಯಶಸ್ವಿ ಆಗ್ಬೇಕು ಅನ್ನೋದು ನನ್ನಾಸೆ… ನೀನ್ ಸೂಪರ್ ಸಕ್ಸಸ್ ಆಗ್ತಿಯ ಅನ್ನೋ ಗ್ಯಾರಂಟಿನೂ ನನಗಿದೆ.. ನನ್ನ ನಂಬಿಕೆ ನಿಜಾ ಮಾಡೇ ಮೈ ಡಿಯರ್ ಗೂಬೆ… ಲವ್ ಯು ಎವರ್.. Im lucky to have you as my sweet sister …

ನಾನ್ಯಾಕೋ ಇತ್ತೀಚಿಗೆ ಸೋಂಬೇರಿ ಆಗಿಬಿಟ್ನಾ ಅನ್ನಿಸ್ತಿದೆ.. ಕೆಲಸ ಇದೆ, ಒಪ್ಕೊಳೋಣ. ಹಂಗಂತಾ ವಾರಕ್ಕೆ ಒಂದು ಪೇಜ್ ಬರೆಯೋಕು ಆಗದಷ್ಟು ಬ್ಯುಸೀನ ??? ಇದ್ರೂ ಇರಬಹುದು… ಆದ್ರೂ ಬರೀಬೇಕು. ಬರೆದ್ರೆ ಮಾತ್ರ ಮನಸು ಹಗುರಾಗೋದು. ಹಾಗಾಗಿ ಮತ್ತೆ ಬರೆಯೋಕೆ ಕೂತಿದಿನಿ. ಇನ್ಮೇಲೆ ಸಮಯ ಸಿಕಾಗ್ಲೆಲ್ಲ ಬರೀತಾ ಇರ್ತೀನಿ, ನೀವು ಸಮಯ ಸಿಕ್ಕಾಗಲೆಲ್ಲಾ  ಓದ್ತಾ ಇರಿ. ನೀವ್ ಓದಿದರೆ ಮಾತ್ರ ನಂಗೂ ಬರೀಬೇಕು ಅನ್ಸೋದು… ಜಾಸ್ತಿ ಕುಯ್ಯೋದಿಲ್ಲ ಡೈರೆಕ್ಟ್ ಆಗಿ ವಿಷಯಕ್ಕೆ ಬರ್ತೀನಿ. ನಾನು ಬರೀದೇ ಇರೋ ಈ ಆರೇಳು ತಿಂಗಳೊಳಗೆ ಏನೆಲ್ಲಾ ಆಗಿಹೋಯ್ತು. ನಾನು ಸುವರ್ಣದ ಅಂಗಳದ ಒಳಗೆ ಸಿಕ್ಕಾಪಟ್ಟೆ ಬ್ಯುಸಿ ಆಗಿ ಹೋದೆ. ಒಂದಷ್ಟು ಸಂಬಳ ಜಾಸ್ತಿ ಆಯ್ತು. ಫ್ರೆಂಡ್ಸ್ ಕಳಿಸೋ ಮೆಸೇಜ್ ಗೆ ರಿಪ್ಲೈ ಮಾಡಿ ತಿಂಗಳುಗಳೇ ಕಳೆದು ಹೋದವು. ಅಮ್ಮ ಅಂತೂ ಹಿಂಗೆ ಕೆಲಸ ಮಾಡಿದ್ರೆ ಸತ್ತು ಹೋಗ್ತಿಯ, ಹೊತ್ತು ಹೊತ್ತಿಗೆ ಊಟ ಮಾಡು, ಆರೋಗ್ಯ ಹುಷಾರು ಅಂತ ಸಾವಿರ ಸಲ ಹೇಳಿದಾರೆ. ಆದ್ರೆ ನಾನು ಒಂದು ಸಲವೂ ಕೇಳಿಸಿ ಕೊಂಡಿಲ್ಲ… ಸಾರಿ ಮೈ ಡಿಯರ್ ಸ್ವೀಟ್ ಮಮ್ಮಿ..
ಅಂದ ಹಾಗೇ ಮತ್ತೊಂದು ವೆರಿ ಇಂಪಾರ್ಟೆಂಟ್ ವಿಷಯ ಹೇಳೇ ಇಲ್ಲ ನೋಡಿ. ಎರಡು ವರ್ಷದಿಂದ ಅನ್ಕೊಂಡಿದ್ದ ಸ್ಟುಡೆಂಟ್ ರಿಪೋರ್ಟರ್ ಪ್ರೋಗ್ರಾಮ್ ಗೆ ಅಪ್ರೂವಲ್ ಸಿಕ್ಕಾಯ್ತು.. ಥ್ಯಾಂಕ್ ಯು ರಂಗನಾಥ್ ಸರ್… ಹಂಗೂ ಹಿಂಗೂ ಪ್ರೋಗ್ರಾಮ್ ಶೂಟಿಂಗ್ ಮುಗೀತಾ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸುವರ್ಣ ನ್ಯೂಸ್ ನ ಮಧ್ಯ ಮಧ್ಯ ಸ್ಟುಡೆಂಟ್ ರಿಪೋರ್ಟರ್, ಛಲವಿದ್ದರೆ ಗೆಲುವು ನಿಮ್ಮದು ಅಂತ ಪ್ರೋಮೋ ಬರ್ತಾ ಇರುತ್ತೆ. ಅಂದ್ರೆ, ಪ್ರೋಗ್ರಾಮ್ ಶುರು ಆಗುತ್ತೆ… ಈ ಪ್ರೋಗ್ರಾಮ್ ಒಳಗೆ ಒಂಭತ್ತು ಅದ್ಭುತಗಳು ಎಂಟ್ರಿ ಕೊಟ್ಟಿವೆ. ಅದ್ರಲ್ಲಿ ಇವತ್ತು ಉಳ್ಕೊಂದಿರೋದು 6 ಅದ್ಭುತ ಮಾತ್ರ, ಹೋದ ಮೂರರಲ್ಲಿ 2 ಗಂಡು ಜೀವಗಳು, ಮತ್ತೊಂದು ಹೆಣ್ಣಾಳು. ಗಂಡು ಜೀವಗಳ ವೇಗ ಜಾಸ್ತಿ ಆಗಿ ಹೊಗೆ ಹಾಕಿಸಿಕೊಂಡರೆ,  ಹೆಣ್ಣು ಜೀವ ಇಂಗ್ಲಿಷ್ ತರ ಕನ್ನಡ ಮಾತಾಡಿ ಮಾತಾಡಿ, ಆದಷ್ಟೂ ಕನ್ನಡ ಕೊಲೆ ಮಾಡಿ ಎಲಿಮಿನೆಟ್ ಆಯ್ತು… ಇನ್ನು ಉಳಿದಿರೋದು ಆರು ಮುತ್ತುಗಳು…
ಉಳಿದ ಮುತ್ತುಗಳಲ್ಲಿ ಒಂದೊಂದೂ ಒಂದೊಂದು ರೀತಿಯ ಟ್ಯಾಲೆಂಟ್ ಗಳು. ಅವರಲ್ಲೊಬ್ಬಳು ಬೆಸ್ಟ್ ಸ್ಟುಡೆಂಟ್ ರಿಪೋರ್ಟರ್ ಆಗ್ತಾಳೆ ಅಂತ ಕನಸು ಕಾಣ್ತಾ ಇದ್ರೆ, ಅವಳ್ಯಾಕೋ ಅವನ ಜೊತೆ ಬ್ಯುಸಿ ಆಗಿದಾಳೆ. ಅವಳ ಮನಸಲ್ಲಿ ಕೆಟ್ಟದಿಲ್ಲ, ಆದ್ರೆ ನೋಡೋ ಕಣ್ಣುಗಳು ಹಾಗಿಲ್ವಲ್ಲ… ಯಾವ್ದಕ್ಕೂ ಹುಷಾರು … ಅವನೋ ಯಾರ ಮಾತೂ ಕೇಳದ ಬುದ್ದಿವಂತ… ಎಲ್ಲಾ ಗೊತ್ತು ಅಂತ ತಿಳಿದಿರೋ ಚಾಲಾಕಿ ಮಾತುಗಾರ… `ಹೊಗೆ’ ಅವನ ಆಪ್ತ ಮಿತ್ರ.. ಅವನ ಮುಂದೆ ಎಲ್ಲರೂ ನಿಕೃಷ್ಟ, ಅವನು ಮಾತ್ರ ನಿಷ್ಠ-ಸ್ಪಷ್ಟ…ಆದ್ರೆ ಅವನೇ ಸ್ವಲ್ಪ ಕಷ್ಟ… ವಯಸ್ಸು ಮಾತ್ರ ಇನ್ನೂ ಹತ್ತೊಂಭತ್ತು, ನೀವು ನಂಬಲೇಬೇಕು… ಮತ್ತೊಂದು ಜೀವ ಇದೇ ಅದು ಪಕ್ಕಾ ರೂರಲ್… ಆದ್ರೆ ಹೆವಿ ಟ್ಯಾಲೆಂಟ್… ಗೊತ್ತಿಲ್ಲ ಅನ್ಕೊಂಡಿರೋ ಬುದ್ದಿವಂತ. ಅವನ ಬಾಯಲ್ಲಿ ಶಾಸಕ, ಸಾಸಕ ಆಗ್ತಾನೆ. ಆದ್ರೆ ಮುಂದೊಂದು ದಿನ ಅವನು ಮಾಧ್ಯಮದ ಪೋಷಕ ಆಗ್ತಾನೆ, ನೋ ಡೌಟ್.. ಇನ್ನು ಅವನೊಬ್ಬನಿದ್ದಾನೆ foodi boy …  ವೆರೈಟಿ ವೆರೈಟಿ ತಿನ್ನೋ ಐಟಂ ಗಳು ಅವನ ಕ್ಲೋಸ್ ಫ್ರೆಂಡ್ಸ್. ಜಗತ್ತಿನಲ್ಲಿ ಯಾರಾದ್ರು ಫ್ರೂಟ್ ಬೌಲ್ ವಿತ್ ಐಸ್ ಕ್ರೀಮ್ ಜೊತೆ ಮಿಲ್ಕ್ ಶೇಕ್ ಕುಡೀತಾರ? ಇಲ್ಲ ತಾನೇ.. ಆದ್ರೆ ಇವನು ಕುಡೀತಾನೆ.. ಆದ್ರೆ ಅಷ್ಟೇ ಕಷ್ಟ ಪಡ್ತಾನೆ. ಪಕ್ಕಾ ರಿಸಲ್ಟ್ ಕೊಡ್ತಾನೆ. ಸಕ್ಕತಾಗಿ ಬರೀತಾನೆ. ಯಾರಿಗೂ ತಲೆ ಕೆಡಿಸ್ಕೊಳ್ಳದೆ,  ಯಾರ್ ಏನೇ ಮಾಡ್ಕೊಂಡ್ರು ರಾತ್ರಿ 11 ಆಗ್ತಿದ್ದ ಹಾಗೇ ಗುಡ್ ನೈಟ್ ಹೇಳಿ ಮಲಗಿ ಬಿಡ್ತಾನೆ… ಪಕ್ಕಾ non sentimental ಹುಡುಗ.. ಬಟ್ ಕೆಲಸದ ಜೊತೆಗೆ ಸಕ್ಕತ್ ಸೆಂಟಿಮೆಂಟು, ಕಮಿಟ್ಮೆಂಟು… ಇನ್ನು ಅವರಿಬ್ರು ಸಾಂಸ್ಕೃತಿಕ ರಾಜಧಾನಿಯಿಂದ ಬಂದ ಜಾಣೆಯರು. ಒಬ್ಬಾಕೆಗೆ ಕಲೀಬೇಕು ಅನ್ನೋ ಹಂಬಲ. ಮತ್ತೊಬ್ಬಳಿಗೆ ಕಲ್ತೇನ್ ಆಗ್ಬೇಕು ಬಿಡು ಅನ್ನೋ ನೆಗ್ಲಿಜೆನ್ಸಿ… ಅವಳಿಗೆ ಏನಾಗುತ್ತೋ, ಹೇಗೆ ಮಾಡ್ತಿನೋ ಅನ್ನೋ ಟೆನ್ಷನ್ನು, ಮತ್ತೊಬ್ಬಳದು  ಲೈಫು ಇಷ್ಟೇನೆ ಅನ್ನೋ ಡಿಸಿಷನ್ನು. ಅವಳಿಗೆ ಛೆ ಛೆ ಸರಿಯಾಗಿ ಟಾಸ್ಕ್ ಮುಗಿಸಲಿಲ್ಲ ಅನ್ನೋ ಫೀಲಿಂಗ್ ಆದ್ರೆ, ಮತ್ತೊಬ್ಬಳಿಗೆ  ನಾನ್ ಸರಿಯಾಗ್ ಮಾಡ್ಲಿಲ್ಲ, ನಾನೇ ನಾಳೆ ಎಲಿಮಿನೆಟ್ ಆಗೋದು ಅನ್ನೋ ಗ್ಯಾರಂಟಿ. by the by
ಇಬ್ಬರೂ ನಮ್ಮ ಟೀಮಿನ ಫೆವರೆಟ್… ಒಟ್ನಲ್ಲಿ ಇವರೆಲ್ಲರ ಈ ಪ್ರಪಂಚದಲ್ಲಿ ನಾನು, ನನ್ನ ಗೆಳೆಯ ಮಲ್ಲಿ ತಲೆಗೆ ಹುಳ ಬಿಟ್ಕೊಂಡು ಓಡಾಡ್ತಾ ಇದೀವಿ. ಮಧ್ಯದಲ್ಲಿ ಬಂದ 103 ಡಿಗ್ರಿ ಜ್ವರ ನನಗೇನು ಮಾಡಿಕೊಳ್ಳೋಕೆ ಆಗ್ಲಿಲ್ಲ. ಮಲ್ಲಿಗೆ ಆದ ಅಲರ್ಜಿ, ಇವನ ಹತ್ರ ಇದ್ರೆ ನಾನ್ ಉದ್ದಾರ ಆಗಲ್ಲ ಅಂತ ಓಡಿ ಹೋಯ್ತು.. ಮೋಹನ ಕೈ ಮುರ್ಕೊಂಡು ನಾಳೆ ಇಂದ ನಾನ್ ಶೂಟಿಂಗ್ ಬರಲ್ಲ ಅಂತ ಹೇಳಿ ಎಸ್ಕೇಪ್ ಆದ… ಮಂಜು, ಕತ್ತು ನೋವು ಗುರು ಆಯ್ತಾ ಇಲ್ಲ ಅಂತ ಮನೆಗೆ ಹೊರಟ… ಹ್ಯಾಪಿ ನ್ಯೂಸ್ ಅಂದ್ರೆ ನಮ್ಮ ಕ್ಯಾಮರಮೆನ್ ಸುಪ್ರೀತ್ ಹುಡುಗೀರ ಜೊತೆ ಮಾತಾಡೋದು ಕಲ್ತ…ಒಟ್ಟಾರೆ, ಸ್ಟುಡೆಂಟ್ ರಿಪೋರ್ಟರ್ ಸೂಪರ್.. ಇನ್ನು ಟಿ ಆರ್ ಪಿ ಸೂಪರ್ ಆಗಿ ಬಂದ್ರೆ ಜೀವನ ಸಾರ್ಥಕ.. ಉಳಿದಿರೋ ಸ್ಟುಡೆಂಟ್ ರಿಪೋರ್ಟರ್ ಗಳಿಗೆ ನನ್ನ ಕಡೆಯಿಂದ ಆಲ್ ದಿ ಬೆಸ್ಟ್… ಇದನ್ನ ಓದಿದೋರೆಲ್ಲ ಸ್ಟುಡೆಂಟ್ ರಿಪೋರ್ಟರ್ ತಪ್ಪದೆ ನೋಡಿ. ಟಿ ಆರ್ ಪಿ ಸಕ್ಕತ್ತಾಗ್ ಬಂದ್ರೆ ಮನೆಗೆ ಬಂದು ಪಾರ್ಟಿ ಕೊಡ್ತೀನಿ. ನಿಮ್ ಕೀ ಬೋರ್ಡ್ ಮೇಲಾಣೆ..

ನಾನ್ಯಾವತ್ತೂ ಅಂದುಕೊಂಡಿರಲಿಲ್ಲ, ನಾನೊಂದು ದಿನ ಕರ್ಫ್ಯೂ ಸಂಧರ್ಭದಲ್ಲಿ ರಿಪೋರ್ಟಿಂಗ್ ಮಾಡ್ತೀನಿ ಅಂತ. ಯಾವ್ದೋ ಶೂಟಿಂಗಿಗೆ ಅಂತ ಶಿವಮೊಗ್ಗಕ್ಕೆ ಹೋಗಿದ್ದವನು ನಾನು. ಇದ್ದಕ್ಕಿದ್ದ ಹಾಗೇ ಫೋನೇ ಬಂತು ಅಲ್ಲಿ ಗಲಾಟೆ ಅಂತೆ, ಶಿವಮೊಗ್ಗ ರಿಪೋರ್ಟರ್ ಗೆ ತಲೆಗೆ ಹೊಡೆತ ಬಿದ್ದಿದ್ಯಂತೆ ಅಂತ. ಆ ಫೋನೇ ಕಟ್ ಮಾಡಿ ಇಡೋದ್ರೊಳಗೆ ನನ್ನ ಬಾಸ್ ರಂಗನಾಥ್ ಸರ್ ಫೋನೇ ಬಂತು. ಅಲ್ಲಿಂದ ಸುದ್ದಿ ಕೊಡೋಕೆ ಶುರು ಮಾಡು. ನೀನೆ ಎಲ್ಲಾ ಸುದ್ದಿ ಕೊಡಬೇಕು ಅಂತ. ಮೈ ಜುಮ್ ಅಂತು. ಆದರೂ ಜೈ ಅಂತ ಸ್ಪಾಟ್ ಗೆ ಹೊರಟೆ. ಅಷ್ಟರಲ್ಲಿ ಶಿವಮೊಗ್ಗ ಹೊತ್ತಿ ಉರಿಯುತ್ತಿತ್ತು. ಕೈಲಿ ಲೋಗೋ ಮೈಕ್ ಹಿಡಿದವನೇ ಕಿರಣ್, ಆತಿಕ್, ನವೀನ್ ಅನ್ನೋ ಯಾವ್ದಕ್ಕೂ ಸೈ ಅನ್ನೋ ಕ್ಯಾಮರಾ ಮೆನ್ ಗಳ ಜೊತೆ ಸ್ಥಳಕ್ಕೆ ಹೊರಟೆ ಬಿಟ್ಟೆ. ನಾನು ಹೋಗುವ ಹೊತ್ತಿಗೆ ಗೋಪಿ ಸರ್ಕಲ್ ನಲ್ಲಿ ಆಟೋ ಒಂದಕ್ಕೆ ಬೆಂಕಿ ಹಚ್ತಾ ಇದ್ರು. ಸ್ವಲ್ಪ ಹಿಂದೆ ತಿರುಗಿದರೆ ಬಟ್ಟೆ ಅಂಗಡಿ ಒಂದು ಧಗ ಧಗನೆ ಹತ್ತಿ ಉರೀತಿತ್ತು. ತಡ ಮಾಡ್ಲಿಲ್ಲ ಮೈಕ್ ಹಿಡಿದವನೇ ಎಲ್ಲಿ ಏನೇನು ನಡೀತಿದೆ ಅನ್ನೋದನ್ನ ಹೇಳ್ತಾ ಹೋದೆ. ಕಿರಣ, ಆತಿಕ್ ಎಲ್ಲವನ್ನೂ ರೆಕಾರ್ಡ್ ಮಾಡ್ತಾ ಇದ್ರು. ಅಷ್ಟರಲ್ಲಿ ಜೆ ಪಿ ಎನ್ ರೋಡಿನಲ್ಲಿ 2-3 ಸಾವಿರ ಜನರ ಗುಂಪು ಕಲ್ಲು ತೂರ್ತಾ ಪೋಲಿಸರೆಡೆಗೆ ಬಂತು. ಅದರ ಮುಂದೆ ನಿಂತು ನಾನು ಸುದ್ದಿಯಾ ಚಿತ್ರಣ ನೀಡ್ತಾ ಹೋದೆ. ಲಾಟಿ ಚಾರ್ಜ್ ಆಗುವಾಗ ಪೋಲೀಸರ ಜೊತೆ ನಾನು, ನನ್ನ ಕ್ಯಾಮರಾ ಮೆನ್ ಸಹ ನುಗ್ಗಿದ್ವಿ. ಇದೆಲ್ಲದರ ಮೊದಲ ವಾಕ್ ತ್ರೂ ಸುವರ್ಣ ನ್ಯೂಸ್ನಲ್ಲಿ ಪ್ರಸಾರವಾಯ್ತು.
ಸಂಜೆ ಹೊತ್ತಿಗೆ ಶಿವಮೊಗ್ಗ ನಗರಕ್ಕೆ ಕರ್ಫ್ಯೂ ಹೇರಲಾಯ್ತು. ಅಲ್ಲಿಂದ ಮುಂದೆ 50-60 ಗಂಟೆಗಳ ತನಕ ಸುವರ್ಣ ನ್ಯೂಸ್ ನಲ್ಲಿ ನನ್ನ ಮುಖ ನನ್ನ ಧ್ವನಿ ಸಾಕಷ್ಟು ಸಲ ಕಾಣಿಸಿಕೊಳ್ತು.. ಒಂದೊಂದೇ ಫೋನೇ ಗಳು ಬರೋಕೆ ಶುರು ಆದವು. ಒಳ್ಳೆ reporting ಅಂತ ಹೊಗಳಿಕೆ ಬಂತು. ಅದೇ ಹುರುಪಿನಲ್ಲಿ ಕೆಲಸ ಮುಂದುವರಿಸ್ದೆ.. ರಾತ್ರಿ 11ರ ತನಕ ಸುದ್ದಿ ಕೊಡ್ತಾನೆ ಇದ್ದೆ. ಮರು ದಿನ ಬೆಳಿಗ್ಗೆ ಎದ್ದವನೇ ಇಡೀ ಶಿವಮೊಗ್ಗ ಸುತ್ತಿ ಎಲ್ಲಿಲ್ಲಿ ಏನಾಯ್ತು ಅನ್ನೋ ವಾಕ್ ತ್ರೂ ಕೊಟ್ಟೆ. ಬರೋಬ್ಬರಿ 12 ನಿಮಿಷ ಇಟ್ಟು. ಆದ್ರೆ ಒಂಚೂರು ಕಟ್ ಆಗದೆ ಅದು 3 ಸಲ ನ್ಯೂಸ್ ನಲ್ಲಿ  ಟೆಲಿಕಾಸ್ಟ್ ಆಯ್ತು. ಅಡ್ಡದ ನಂತರ ಕರ್ಫ್ಯೂ ಶಿವಮೊಗ್ಗ ಜನರನ್ನ ಹೇಗೆ ತತ್ತರ ಆಗೋ ಹಾಗೇ ಮಾಡಿದೆ ಅನ್ನೋದನ್ನ ಕವರ್ ಮಾಡಿ ಮತ್ತೊಂದು ವಾಕ್ ತ್ರೂ ಮಾಡಿದೆ. ಅದಾದ ಮೇಲೆ ನಡೆದ ಗಲಭೆ, ಗಲಾಟೆ, ಬೆಳವಣಿಗೆ ಎಲ್ಲವನ್ನೂ ತುಂಬಾ ಸೂಕ್ಷ್ಮವಾಗಿ ಕವರ್ ಮಾಡಿ ಸುದ್ದಿ ಕೊಡ್ತಾ ಬಂದೆ. ಅದು ಕೋಮು ಗಲಭೆ ಆಗಿದ್ರಿಂದ ಮಾಧ್ಯಮದವರಾಗಿ ನಾವೂ ಸಹ ಸ್ವಲ್ಪ ಜವಾಬ್ದಾರಿಯುತವಾಗಿಯೇ ಸುದ್ದಿ ಮಾಡಬೇಕಾಗಿತ್ತು. ಅದನ್ನ ನಾನು ಚೆನ್ನಾಗಿ ನಿಭಾಯಿಸದೆ ಅಂತ ಎಲ್ಲರೂ ಫೋನ್ ಮಾಡಿ ಹೇಳಿದ್ರು. ಮಾರನೆ ದಿನ ಒಂದೂವರೆ ಗಂಟೆ ಕಾಲ ಕರ್ಫ್ಯೂ ಸಡಿಲಿಕೆ ಆದಾಗ ಅಲ್ಲಿನ ಪರಿಸ್ತಿತಿಯನ್ನ ನನ್ನದೇ ಸ್ಟೈಲ್ ನಲ್ಲಿ ಮತ್ತೊಂದು ವಾಕ್ ತ್ರೂ ಮೂಲಕ ವಿವರಿಸದೆ. ಎಲ್ಲವೂ ಸಕ್ಸಸ್ ಫುಲ್ … ತುಂಬಾ ಖುಷಿ ಅನ್ನಿಸ್ತು… ಕರ್ಫ್ಯೂ ಸಡಿಲಿಕೆ ದಿನ ನನ್ನನ್ನ ಶಿವಮೊಗ್ಗದ ಜನ ಗುತಿಸಿದ್ರು. ಸುವರ್ಣ ನ್ಯೂಸ್ ಕೀರ್ತಿ ಶಂಕರಘಟ್ಟ ಅಂತ ಮಾತಾಡ್ಸಿದ್ರು. ತುಂಬಾ ಖುಷಿ ಆಯ್ತು. ನಾನು ಸಹ ಎಂತಹ ಸಂಧರ್ಬದಲ್ಲೂ roporting ಮಾಡಬಲ್ಲೆ ಅನ್ನೋದನ್ನ ಸಾಭೀತು ಪಡಿಸಲಿಕ್ಕೆ ಒಂದು ಅವಕಾಶ ಸಿಕ್ತು. ನನ್ನ ಬಗ್ಗೆ ನನಗೆ ಖುಷಿ ಅನ್ನಿಸ್ತು. ಬರುವಾಗ ಅಮ್ಮನ್ನ ಮಾತಾಡಿಸೋಕೆ ಮನೆಗೆ ಹೋಗಿದ್ದೆ ಅಮ್ಮ ಖುಷೀಲಿ ದೃಷ್ಟಿ ತೆಗೆದು ಮುದ್ದು ಮಾಡಿ ಕಳಿಸಿದರು. 4 ವರ್ಷದಿಂದ ಮಾಧ್ಯಮದಲ್ಲಿದ್ದಿದ್ದು ಸಾರ್ಥಕ ಅನ್ನಿಸ್ತು. ಇನ್ನಷ್ಟು ಸಾಧಿಸೋ ಆಸೆ ಚಿಗುರೊಡೀತು.
ಈ ಅನುಭವವನ್ನ ಒಂದು ಪುಸ್ತಕವಾಗಿಸೋ ಆಸೆ ಇದೆ… ಏನಾಗುತ್ತೋ ನೋಡ್ಬೇಕು…

ಹಾಯ್ ಸ್ನೇಹಿತರೆ.

Recession ಟೈಮ್ ಆಗಿರೋದ್ರಿಂದ ನಾನೂ ನನ್ನ ಹಳೆಯ ಗರ್ಲ್ ಫ್ರೆಂಡ್ ನ ಬಿಟ್ಟಿದ್ದೇನೆ. (ಅವಳು ಸ್ವಲ್ಪ costly ಎಂಬ ಕಾರಣಕ್ಕೆ.) ಹಾಗಾಗಿ ನಾನೀಗ ಹೊಸ ಹುಡುಗಿಯನ್ನ ನನ್ನ ಗರ್ಲ್ ಫ್ರೆಂಡ್ ಆಗಿ appoint ಮಾಡಿಕೊಳ್ತಾ ಇದ್ದೇನೆ. ನಿಮಗೆ ಯಾರಾದ್ರು ಗೆಳತಿಯರಿದ್ರೆ ಈ ಆಫರ್ ನ ಅವರಿಗೆ ಕಳುಹಿಸಿ.

 ಉದ್ಯೋಗ ಅವಕಾಶ ಇರೋದು ಈ ಕೆಳಗಿನ ಪೋಸ್ಟ್ ಗೆ. ಸಂಬಳ ಮತ್ತು ಭತ್ಯೆ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ.

 ಹುದ್ದೆ: Junior girl friend (ತರಭೇತಿ)

ಅನುಭವ: ಕನಿಷ್ಠ ಇಬ್ಬರು ಹುಡುಗರಿಗೆ ಕೈ ಕೊಟ್ಟಿರಬೇಕು (ಸುಂದರವಾದ freshers ಸಹ apply ಮಾಡಬಹುದು)

ಇತರೆ : ಬೀದಿಗಳಲ್ಲಿ ನಿಂತು ಚೌಕಾಸಿ ಮಾಡೋಕೆ ಬರಬೇಕು. ಬೇಕೆನಿಸಿದರೆ ಜಗಳ ಆಡಲು ತಯಾರಿರಬೇಕು.

 ವಯೋಮಿತಿ: 18-23 (ಏಕಾಂಗಿಯಾಗಿರುವ ಸುಂದರವಾದ ಯುವತಿಯರು ವಯೋಮಿತಿ ಮೀರಿದ್ದರೂ ಪ್ರಯತ್ನಿಸಬಹುದು. ಅಂತಹವರಿಗೆ ವಿಶೇಷ ಆದ್ಯತೆ ಇದೆ. )

ಎತ್ತರ, ತೂಕ, ಬಣ್ಣದ ಬಗ್ಗೆ ನಿರ್ದಿಷ್ಟ ಸೂಚನೆಗಳಿಲ್ಲ. ನೀವು ನಿಮಗೆ ಚೆನ್ನಾಗಿದ್ದೀನಿ ಅನ್ಸಿದ್ರೆ ಅಪ್ಲೈ ಮಾಡಬಹುದು.

ಸಂಬಳ ಮತ್ತು ಭತ್ಯೆಗಳು: ಒಟ್ಟು (ತಿಂಗಳಿಗೆ) :

• 1000 ರುಪಾಯಿ ಮೌಲ್ಯ ಮೀರದ 2 ಗಿಫ್ಟ್ ಗಳು./-

• ಬೈಕ್ ನಲ್ಲಿ ಪ್ರತಿ ಮೀಟಿಂಗ್ ನಲ್ಲೂ ಒಂದು ಗಂಟೆ ಸುತ್ತಾಟ.

• ನ್ಯಾಷನಲ್ ಹೈ ವೇಗೆ ಟ್ರಿಪ್ ಗಳು.

• ಹನುಮಂತ ಮಂದಿರ ಹಾಗು ಸಿದ್ದಿ ವಿನಾಯಕ ದೇವಸ್ತಾನಕ್ಕೆ ಎರಡು ಭೇಟಿ.

• ಪ್ರತಿ 3 ದಿನಕ್ಕೊಮ್ಮೆ ಚಾಕಲೇಟ್ ಹಾಗು ಐಸ್ ಕ್ರೀಮ್.

• ಪ್ರತಿ ದಿನ 10 ರುಪಾಯಿ ಮೌಲ್ಯದ ಬೆಲ್ ಪುರಿ, ಪಾನಿ ಪುರಿ ಅಥವಾ ಸಮೋಸ.

• ತಿಂಗಳಿಗೆ 2 ಸಲ ಫಿಲಂ ಗೆ ( ವಾರಾಂತ್ಯಹೊರತು ಪಡಿಸಿ) .

• ನಿಮ್ಮದೇ ಖರ್ಚಿನಲ್ಲಿ ಪ್ರತಿ ವಾರಕ್ಕೊಮ್ಮೆ ಬರಿಸ್ತಾ, ಕಾಫಿ ಡೇ ಅಥವಾ ಮ್ಯಾಕ್ ಡಿ.

ಯಾವುದಾದರೂ ವಿಶೇಷ ಸಂಧರ್ಭದಲ್ಲಿ ಒಂದು ಜೊತೆ ಜೀನ್ಸ್, ಹಾಗು ಟಿ ಶರ್ಟ್ , .

 ಸಂಬಳದಲ್ಲಿ ಕಡಿತಗಳು. (ಪ್ರತಿ ತಿಂಗಳು): ಆಯ್ಕೆಯಾದಲ್ಲಿ ಇದರ ಬಗ್ಗೆ ತಿಳಿಸಲಾಗುವುದು.

6 ತಿಂಗಳವರೆಗೆ probationary , ಅದರ ನಂತರ ಇಷ್ಟವಾದಲ್ಲಿ ಜೀವನ ಪೂರ್ತಿ ಗರ್ಲ್ ಫ್ರೆಂಡ್ ಆಗಿ ಬಡ್ತಿ.

ನೆನಪಿರಲಿ:

 1. ಕೇವಲ ಹುಡುಗಿಯರಿಗೆ

2. 2 ತಿಂಗಳನಿಂದೀಚೆಗೆ ಯಾವುದೇ ಹುಡುಗನಿಗೆ ಕೈ ಕೊಟ್ಟವರಿಗೆ ಅವಕಾಶವಿಲ್ಲ. .

 3. Ex-girlfriends ಸಹ ಅಪ್ಲೈ ಮಾಡಬಹುದು( ಮೇಲಿನ ಎಲ್ಲ conditions ಗೆ ಹೊಂದಿಕೊಳ್ಳುವುದಾದರೆ). .

ಇನ್ನೂ ಇದೆ:

ಈ ಮೇಲ್ಕಂಡ ನಿಬಂದನೆಗಳನ್ನು ಒಪ್ಪದ ಹುಡುಗಿಯರು ತಮ್ಮ ಗೆಳತಿಯರನ್ನು ಪರಿಚಯಿಸಬಹುದು. ಪ್ರತಿ refferal ಗೆ ಒಂದು ಕ್ಯಾಂಡಲ್ ಲೈಟ್ ಡಿನ್ನರ್ ಉಚಿತ.( ಅಭ್ಯರ್ಥಿ ಆಯ್ಕೆಯಾಗದಿದ್ದರೂ ಸಹ)

ಹುಡುಕಾಟ ಎಂದಿಗೂ ಮುಗಿಯದು.!!

ಗರ್ಲ್ ಫ್ರೆಂಡ್ ಆಗಲು ಇಚ್ಚಿಸುವವರು resume ಕಳುಹಿಸಬಹುದು.

 ಕಡ್ಡಾಯವಾಗಿ ಇದನ್ನು ತಿಳಿಸಲೇ ಬೇಕು: ಹೆಸರು/ಅನುಭವ/ವಯಸ್ಸು .

 ಕಡ್ಡಾಯವಾಗಿ ಫೋಟೋ ಕಳುಹಿಸಲೇ ಬೇಕು.

ಸೂಚನೆ: ಫೋಟೋ ಇಲ್ಲದ ಅಪ್ಲಿಕೇಶನ್ ತಿರಸ್ಕೃತವಾಗುವುದು.

ಗೂಗಲ್ ಇಡೀ ಪ್ರಪಂಚ ಅತಿ ಹೆಚ್ಚು ಉಪಯೋಗಿಸೋ ಸರ್ಚ್ ಇಂಜಿನ್. ಭಾರತೀಯರಿಗೂ ಇದು ಅಚ್ಚುಮೆಚ್ಚು. ಗೂಗಲ್ ಅತಿ ಹೆಚ್ಚು ಉಪಯೋಗಿಸುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಆದ್ರೆ ಗೂಗಲ್ ಭಾರತೀಯರಿಗೆ ಮಾಡಿದ ದ್ರೋಹ ಮಾತ್ರ ಕ್ಷಮಿಸಲು ಅಸಾಧ್ಯ. ಈಗಾಗಲೇ ಅತ್ತ ಪಾಕಿಸ್ತಾನ, ಇತ್ತ ಚೀನಾದ ಹಾವಳಿ ಭಾರತಕ್ಕೆ ಸೆರಗಿನ ಕೆಂಡವಾಗಿ ಪರಿಣಮಿಸಿದೆ. ಅದೇ ಸಮಯಕ್ಕೆ ಗೂಗಲ್ ಭಾರತದ ನಕ್ಷೆಯನ್ನೇ ಬದಲಾಯಿಸಿಬಿಟ್ಟಿದೆ.
ಅದರಲ್ಲೂ ಎರೆಡೆರೆಡು ರೀತಿಯ ನಕ್ಷೆ ರೂಪಿಸಿ  ಭಾರತದ ಕಣ್ಣಿಗೆ ಸುಣ್ಣ ಬಳಿದು, ಚೀನಾಗೆ ಬೆಣ್ಣೆ ಹಚ್ಚುವ ಕಾರ್ಯಕ್ಕೆ ಕೈ ಹಾಕಿದೆ.
ಅರುಣಾಚಲ ಪ್ರದೇಶದ ವಿಚಾರವಾಗಿ ಭಾರತ ಮತ್ತು ಚೀನಾ ನಡುವೆ ಜಿದ್ದಾಜಿದ್ದಿ ನಡೀತಾನೆ ಇದೆ. ಇದೆ ಸಂದರ್ಭದಲ್ಲಿ ಗೂಗಲ್ ಮಾಡಿರೋದೆನು ಗೊತ್ತ?          ಭಾರತದ ನಕ್ಷೆಯಲ್ಲಿ ಅರುಣಾಚಲ ಪ್ರದೇಶವನ್ನು ಬೇಕೋ ಬೇಡವೋ ಎಂಬಂತೆ ವಿವಾದಿತ ಸ್ಥಳ ಎಂಬಂತೆ ಬಿಂಬಿಸಿದರೆ, ಚೀನಾ ಭಾಷೆಯಲ್ಲಿರೋ  ಭಾರತದ ನಕ್ಷೆಯಲ್ಲಿ ಅರುಣಾಚಲ ಪ್ರದೇಶವೇ ಇಲ್ಲ. ಅದು ಸಂಪೂರ್ಣ ಚೀನಾದ ಪಾಲಾಗಿದೆ. ಯಾವ ಆಧಾರದ ಮೇಲೆ ಈ ನಕ್ಷೆಯನ್ನ ಗೂಗಲ್ ಸಿದ್ದಪಡಿಸಿದೆ ಎಂಬುದೇ ಈಗಿರುವ ಪ್ರಶ್ನೆ.
ಭಾರತೀಯ version ನಕ್ಷೆಗಾಗಿ maps.google.com ಗೆ ಭೀತಿ ನೀಡಿ. ಚೀನೀ ಭಾಷೆಯ ನಕ್ಷೆಗೆ ditu.google.com ನೋಡಿ.
ಇದರ ಜೊತೆಗೆ ಗೂಗಲ್ ಜಮ್ಮು ಕಾಶ್ಮೀರದ ಒಂದು ಭಾಗವನ್ನೇ ಚೀನಾಗೆ ಧಾರೆ ಎರೆದು ಕೊಟ್ಟುಬಿಟ್ಟಿದೆ.  ಭಾರತೀಯ version ನಲ್ಲಿ ಯಾವ ಭಾಗವನ್ನು ವಿವಾದಿತ ಎಂಬಂತೆ ಬಿಂಬಿಸಿದೆಯೋ ಆ ಭಾಗವನ್ನು ಗೂಗಲ್ ಚೀನಾ ಭಾಷೆಯ ನಕ್ಷೆಯಲ್ಲಿ ಚೀನಾಗೆ ಧಾರೆ ಎರೆದಿದೆ. ಗೂಗಲ್ ಈ ರೀತಿ ಪಾಗಲ್ ಪಾಗಲ್ ಆಗಿ ಗಡಿ ವಿಚಾರದಲ್ಲಿ ಆಟವಾಡ್ತಾ ಇರೋದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನ ಯೋಚಿಸಬೇಕಾಗಿದೆ. ಇಲ್ಲವಾದರೆ ಅನುಮಾನವೇ ಬೇಡ,  ಹಂತ ಹಂತವಾಗಿ ಭಾರತದ ಭೂಪಟ ಬದಲಾಗುತ್ತಲೇ ಇರುತ್ತೆ. ಅತ್ತ ಚೀನಾ ಇತ್ತ ಪಾಕ್ ಪ್ರಾಬಲ್ಯ ಮೆರೆಯುತ್ತಲೇ ಸಾಗುತ್ತವೆ. ಓ ದೇವ್ರೇ ಈ ರಾಜಕಾರಣಿಗಳಿಗೆ ದೇಶದ ಬಗ್ಗೆ ಯೋಚಿಸೋ ಮನಸ್ಥಿತಿಯನ್ನ ಕೊಡು..